ADVERTISEMENT

ಬಿಬಿಎಂಪಿ ಕಾಲೇಜು ವಿದ್ಯಾರ್ಥಿನಿಗೆ ಪ್ರಥಮ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 19:25 IST
Last Updated 4 ಜನವರಿ 2020, 19:25 IST
ರಹಮತುನ್ನಿಸಾ
ರಹಮತುನ್ನಿಸಾ   

ಬೆಂಗಳೂರು: ನಗರದ ಕ್ಲೇವ್‌ಲ್ಯಾಂಡ್‌ ಟೌನ್‌ನಲ್ಲಿರುವ ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ.ವ್ಯಾಸಂಗ ಮಾಡಿರುವ ರಹಮತುನ್ನಿಸಾ ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಇದೀಗ ಎಂ.ಕಾಂ. ವ್ಯಾಸಂಗ ಮಾಡುತ್ತಿರುವ ಅವ
ರಿಗೆ ಫಲಿತಾಂಶ ಕಂಡು ಅಚ್ಚರಿಯಾಯಿತು. ಜತೆಗೆ ಕಷ್ಟಪಟ್ಟು ಓದಿದ್ದಕ್ಕೆ ತಕ್ಕ ಫಲ ದೊರೆತುದರಿಂದ ಬಹಳ ಸಂತೋಷವೂ ಆಯಿತು.

ಕಷ್ಟದ ಜೀವನ: ರಹಮತುನ್ನಿಸಾ ಅವರು ಚಿಕ್ಕವರಿದ್ದಾಗಲೇ ತಂದೆಯನ್ನು ಕಳೆದುಕೊಂಡ
ವರು. ಆಗ ಆರನೇ ತರಗತಿಯಲ್ಲಿದ್ದ ಹಿರಿಯ ಅಣ್ಣನೇ ತನ್ನ ನಾಲ್ಕೂ ಮಂದಿ ತಂಗಿಯರ ಹೊಣೆ ಹೊತ್ತು
ಕೊಂಡರು. ರಹಮತುನ್ನಿಸಾ ಅವರ ಇಬ್ಬರು ಸಹೋದರಿಯರು 10ನೇ ತನಕ ಓದಿದ್ದರೆ, ಒಬ್ಬ ಸಹೋದರಿ ದ್ವಿತೀಯ ಪಿಯುಸಿ ಓದಿದ್ದಾರೆ. ಕುಟುಂಬದಲ್ಲಿ ಪದವಿ ಗಳಿಸಿ, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದವರು ಇವರೊಬ್ಬರೇ. ‘ಕಾಲೇಜಿನ ಪ್ರಾಂಶುಪಾಲರು ಕರೆ ಮಾಡಿ ಹೇಳಿದಾಗಲೇ ನನಗೆ ಈ ವಿಷಯ ಗೊತ್ತಾಗಿದ್ದುದು. ನಿಜಕ್ಕೂ ಮೊದಲಿಗೆ ನನಗೆ ನಂಬಲು ಸಾಧ್ಯವಾಗಲೇ ಇಲ್ಲ. ಬಳಿಕ ನಾನು ಖುಷಿಯಿಂದ ಅತ್ತುಬಿಟ್ಟೆ. ಇದುವರೆಗೆ ಸಿ.ಎ ಮಾಡಬೇಕೆಂಬ ಗುರಿ ಇತ್ತು, ಇದೀಗ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಲ್ಗೊಂಡು ಸರ್ಕಾರಿ ಸೇವೆಗೆ ಸೇರಿಕೊಳ್ಳಬೇಕೆಂಬ ವಿಚಾರ ಮಾಡಿದ್ದೇನೆ’ ಎಂದು ಅವರು ಹೇಳಿದರು.

ADVERTISEMENT

7ನೇ ತರಗತಿ ತನಕ ಸರ್ಕಾರಿ ಉರ್ದು ಶಾಲೆಯಲ್ಲಿ ಓದಿದ್ದರು. ಪಿಯು ಶಿಕ್ಷಣವನ್ನು ಇದೇ ಬಿಬಿಎಂಪಿ ಕಾಲೇಜಿ
ನಲ್ಲಿ ಪೂರೈಸಿದ್ದರು.ಶೇ 96ರಷ್ಟು ಅಂಕ ಗಳಿಸಿದ್ದರು.

ಸಚಿವರ ಪ್ರಶಂಸೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದು, ತಮ್ಮ ಫೇಸ್‌ಬುಕ್‌ನಲ್ಲೂ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.