ಬೆಂಗಳೂರು: ‘ಕೊರೊನಾ ಸೋಂಕಿನಿಂದ ವಾಣಿಜ್ಯ ವಹಿವಾಟು ಕುಂಠಿತವಾಗಿದ್ದು, ಈ ಸಂದರ್ಭದಲ್ಲಿ ವ್ಯಾಪಾರ ಪರವಾನಗಿ ಶುಲ್ಕ ಮತ್ತು ಖಾತಾ ಶುಲ್ಕ ಏರಿಕೆ ಮಾಡುವುದರಿಂದ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಸಿ.ಆರ್. ಜನಾರ್ದನ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
‘ಕೋವಿಡ್ ಸೋಂಕಿನಿಂದ ನಿರ್ಮಾಣವಾಗಿರುವ ಆರ್ಥಿಕ ತುರ್ತು ಪರಿಸ್ಥಿತಿಯಿಂದಾಗಿ ಸಾವಿರಾರು ಅಂಗಡಿಗಳು ಮುಚ್ಚಿವೆ. ಇಂಥ ಸಂದರ್ಭದಲ್ಲಿ ಪರವಾನಗಿ ಶುಲ್ಕ, ಖಾತಾ ಶುಲ್ಕ ಮತ್ತು ಅಭಿವೃದ್ಧಿ ಶುಲ್ಕ ಏರಿಕೆ ಮಾಡಲಾಗುತ್ತಿದೆ. ವರಮಾನ ಸಂಗ್ರಹಕ್ಕೆ ಬಿಬಿಎಂಪಿಗೆ ಸಾಕಷ್ಟು ಅವಕಾಶಗಳಿವೆ. ಅಕ್ರಮ ಸಕ್ರಮದಲ್ಲಿ ಸಾಕಷ್ಟು ವರಮಾನ ಪಡೆಯಬಹುದಾಗಿದೆ. ಆದರೆ, ಶುಲ್ಕ ಏರಿಕೆ ಮಾಡಿ ವ್ಯಾಪಾರಿ ಮತ್ತು ಉದ್ಯಮಿಗಳಿಗೆ ಕಿರುಕುಳ ನೀಡಬಾರದು’ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.