ಬೆಂಗಳೂರು: ಜನಪದ ಕಲೆ ಮತ್ತು ಸಂಸ್ಕೃತಿ ಸಮಾಜವನ್ನು ಬೆಸೆಯುತ್ತಿವೆ. ಇಂಥ ಕಲೆಗಳಿಂದಲೇ ಗ್ರಾಮೀಣ ಭಾಗದಲ್ಲಿ ಒಂದಷ್ಟು ಶಾಂತಿ, ನೆಮ್ಮದಿ ನೆಲಸಿದೆ’ ಎಂದು ವೈದ್ಯ ಆಂಜಿನಪ್ಪ ಅಭಿಪ್ರಾಯಪಟ್ಟರು.
ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ರಂಗ ಸಂಸ್ಥಾನ ಏರ್ಪಡಿಸಿದ್ದ ರಾಜ್ಯಮಟ್ಟದ ಕಲಾ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರದರ್ಶಿತವಾದ ಜನಪದ ಕಲೆಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ. ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತವೆ’ ಎಂದು ತಿಳಿಸಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ‘ಹೆಚ್ಚು ಶಿಕ್ಷಣ ಪಡೆಯುತ್ತಾ ಮನಸ್ಸು ಸಂಕುಚಿತವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲಿಲ್ಲ. ಎಲ್ಲಿ ಮನಸ್ಸು ಮುಕ್ತವಾಗಿ ತೆರೆದುಕೊಳ್ಳುತ್ತದೆಯೋ ಅದೇ ನಿಜವಾದ ಶಿಕ್ಷಣ ಎಂದು ಅಭಿಪ್ರಾಯಪಟ್ಟರು.
ರಂಗ ಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ್ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಮೇಜರ್ ಆನಂದಪ್ಪ ಈರಮುಖದವರ, ಪತ್ರಕರ್ತರಾದ ಲೇಪಾಕ್ಷಿ ಸಂತೋಷರಾವ್, ವಾಣಿಜ್ಯ ವಿಭಾಗದ ನಿರ್ದೇಶಕರಾದ ಡಾ. ಆರ್. ಭಾರ್ಗವಿ, ಕನ್ನಡ ವಿಭಾಗದ ಡಾ. ಗೀತಾ ಅವರು ಉಪಸ್ಥಿತರಿದ್ದರು. ಶಿವರಾಮ ದೊಡ್ಡಿ ಅವರು ನಿರೂಪಿಸಿದರು.
ಶಿವಕುಮಾರ್ ಬೇಗಾರ ಅವರ ತಂಡವು ‘ಕಂಸವಧೆ’ ಯಕ್ಷಗಾನ ಪ್ರದರ್ಶಿಸಿತು. ರಾಮನಗರದ ಚಂದ್ರಶೇಖರ್ ತಂಡದವರು ಡೊಳ್ಳು ಕುಣಿತ ಪ್ರದರ್ಶಿಸಿದರು. ಹಿದಾಯತ್ ಅಹಮದ್ ಅವರ ನಿರ್ದೇಶನದಲ್ಲಿ ಸರ್ಕಾರಿ ಕಲಾ ಕಾಲೇಜಿನ ತಂಡದವರು ಹಾಲಕ್ಕಿ ಸುಗ್ಗಿ ಕುಣಿತವನ್ನು ಪ್ರದರ್ಶಿಸಿದರು. ಆನೇಕಲ್ನ ನಳಿನಾಕ್ಷಿ ಮತ್ತು ತಂಡದವರು ಕೋಲಾಟ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.