ADVERTISEMENT

ಬೆಂಗಳೂರು: ಅಕ್ಟೋಬರ್ 27ರಿಂದ 29ರವರೆಗೆ ತಿಂಡಿಪೋತರ ಹಬ್ಬ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 15:45 IST
Last Updated 25 ಅಕ್ಟೋಬರ್ 2023, 15:45 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಐ ‌ನೆಟ್‌ ವರ್ತಿಂಗ್‌ ಸಂಸ್ಥೆಯು ಇದೇ 27ರಿಂದ 29ರವರೆಗೆ ನಾಯಂಡಹಳ್ಳಿಯ ಪಂತರ ಪಾಳ್ಯದ ನಂದಿ ಲಿಂಕ್ ಮೈದಾನದಲ್ಲಿ ‘ತಿಂಡಿಪೋತರ ಹಬ್ಬ’ ಹಮ್ಮಿಕೊಂಡಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಬ್ಬದ ಆಯೋಜಕ ಡಿ. ನರೇಶ್‌ ಬಾಬು, ‘ಮೂರು ದಿನಗಳ ಈ ಹಬ್ಬದಲ್ಲಿ 80ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ಸಾವಿರಕ್ಕೂ ಹೆಚ್ಚು ಬಾಣಸಿಗರ ಕೈರುಚಿಯನ್ನು ಆಸ್ವಾದಿಸಬಹುದಾಗಿದೆ. ಇಲ್ಲಿ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. 600ಕ್ಕೂ ಹೆಚ್ಚು ಬಗೆಯ ವಿವಿಧ ಸಸ್ಯಹಾರಿ ಆಹಾರ ಖಾದ್ಯಗಳನ್ನು ಸವಿಯಬಹುದು. ಕೆಲವರು ಸ್ಥಳದಲ್ಲಿಯೇ ತಿನಿಸುಗಳನ್ನು ತಯಾರಿಸಿ ವಿತರಿಸುತ್ತಾರೆ’ ಎಂದು ಹೇಳಿದರು.  

ADVERTISEMENT

‘ಮೂರು ದಿನಗಳ ಈ ಹಬ್ಬದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ದಕ್ಷಿಣ ಭಾರತ, ಉತ್ತರ ಭಾರತದ ವಿವಿಧ ದೇಸಿ ಮತ್ತು ವಿದೇಶಿ ಆಹಾರಗಳು ಇಲ್ಲಿರುತ್ತವೆ’ ಎಂದು ತಿಳಿಸಿದರು. 

ಇನ್ನೊಬ್ಬ ಆಯೋಜಕ ಡಿ.ಡಿ. ಪ್ರಶಾಂತ್‌, ‘ಈ ಹಬ್ಬದಲ್ಲಿ ಪರಿಸರಸ್ನೇಹಿ ವಸ್ತುಗಳಿಗೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಹಾಡು, ನೃತ್ಯ ಸೇರಿ ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಶುಲ್ಕ ಒಬ್ಬರಿಗೆ ₹ 50 ನಿಗದಿಪಡಿಸಲಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಪ್ರಾರಂಭವಾಗಲಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.