
ಬೆಂಗಳೂರು: ಕುಡಿದ ಮತ್ತಿನಲ್ಲಿ ಕರ್ತವ್ಯನಿರತ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಆರೋಪಿಯೊಬ್ಬ ತಪ್ಪಿಸಿಕೊಳ್ಳಲು ಕಾರಣರಾದ ಆರೋಪದಡಿ ಬೆಲ್ಜಿಯಂನ ಕ್ವಿಂಟನ್ ಚೆಮಿತ್ (33) ಹಾಗೂ ಆತನ ಸ್ನೇಹಿತ ಮಂಜುನಾಥ್ (26) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ರಾತ್ರಿ 1.30ರ ಸುಮಾರಿಗೆ ಬ್ಯಾಟರಾಯನಪುರದ ಕೆಎಂಸಿ ಬಾರ್ ಬಳಿ ಈ ಘಟನೆ ನಡೆದಿದೆ. ಆರೋಪಿಗಳು ಹೆಲ್ಮಟ್ನಿಂದ ಹೊಡೆದಿದ್ದು, ಕಾನ್ಸ್ಟೆಬಲ್ ಕೆ.ಎನ್.ಲಕ್ಷ್ಮಣ್ ಅವರ ಹಣೆಗೆ ಗಾಯವಾಗಿದೆ. ಎರಡು ಹೊಲಿಗೆ ಹಾಕಲಾಗಿದ್ದು, ಪ್ರೊಲೈಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾರಿಗೋ ಬೆನ್ನಟ್ಟಿದ್ದು: ‘ಮುನಿರಾಜು ಎಂಬಾತ ಬ್ಯಾಟರಾಯನಪುರದ ಶಬರಿ ಬೇಕರಿ ಮಾಲೀಕರಿಗೆ ಮಚ್ಚು ತೋರಿಸಿ ಬೆದರಿಸುತ್ತಿರುವುದಾಗಿ ಮಾಹಿತಿ ಬಂತು. ಗಸ್ತಿನಲ್ಲಿದ್ದ ನಾವು ಸ್ಥಳಕ್ಕೆ ತೆರಳಿದಾಗ ಆತ ಹೊರಟು ಹೋಗಿದ್ದ. 1.30ರ ಸುಮಾರಿಗೆ ಮುನಿರಾಜು ತನ್ನ ಸ್ನೇಹಿತರ ಜತೆ ಕೆಎಂಸಿ ಬಾರ್ ಬಳಿ ಇರುವುದಾಗಿ ಮಾಹಿತಿ ಬಂತು. ಕಾನ್ಸ್ಟೆಬಲ್ ಲೋಹಿತ್, ಗೃಹರಕ್ಷಕ ಎಚ್.ಜಿ. ನರಸಿಂಹ ಅವರನ್ನು ಕರೆದುಕೊಂಡು ಅಲ್ಲಿಗೆ ಹೋದೆ’ ಎಂದು ಲಕ್ಷ್ಮಣ್ ದೂರಿನಲ್ಲಿ ವಿವರಿಸಿದ್ದಾರೆ.
‘ನಮ್ಮನ್ನು ನೋಡುತ್ತಿದ್ದಂತೆಯೇ ಮುನಿರಾಜು ಓಡಲಾರಂಭಿಸಿದ. ಪ್ರಕರಣಕ್ಕೆ ಸಂಬಂಧವೇ ಇಲ್ಲದ ಚೆಮಿತ್ ಹಾಗೂ ಮಂಜುನಾಥ್ ಸಹ ಆತನ ಹಿಂದೆಯೇ ಓಡಿದರು. ನಾವು ಬೆನ್ನಟ್ಟಿದಾಗ ಹಲ್ಲೆ ಮಾಡಿದರು’ ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿರುವ ಚೆಮಿತ್, ಕುಟುಂಬದ ಸದಸ್ಯರೊಂದಿಗೆ ಕೆಂಪಾಪುರದ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ನೆಲೆಸಿದ್ದಾನೆ. ಮಂಜುನಾಥ್ ಅಮೃತಹಳ್ಳಿ ನಿವಾಸಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಮುನಿರಾಜು ಬಂಧನಕ್ಕೆ ಶೋಧ ನಡೆಯುತ್ತಿದೆ.
* ರಾತ್ರಿ 1.30ರವರೆಗೂ ರಸ್ತೆ ಮಧ್ಯೆ ಕುಡಿಯುತ್ತ ಕುಳಿತಿದ್ದೆವು. ಅದೇ ಕಾರಣಕ್ಕೆ ಪೊಲೀಸರು ನಮ್ಮನ್ನು ಹಿಡಿಯಲು ಬಂದಿರಬಹುದೆಂದು ಭಾವಿಸಿ ತಪ್ಪಿಸಿಕೊಳ್ಳಲು ಯತ್ನಿಸಿದೆವು- ಚೆಮಿತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.