ADVERTISEMENT

ಕತಾರ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ನಾಲ್ವರು ಮಹಿಳೆಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 0:01 IST
Last Updated 23 ಫೆಬ್ರುವರಿ 2020, 0:01 IST

ಬೆಂಗಳೂರು: ಉದ್ಯೋಗ ಅರಸಿ ಕತಾರ್‌ಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ನಾಲ್ವರು ಮಹಿಳೆಯರನ್ನು ನಗರದ ವಲಸಿಗರ ರಕ್ಷಣಾ ಕೇಂದ್ರದ ಅಧಿಕಾರಿಗಳು ರಕ್ಷಿಸಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ಕರೆತಂದಿದ್ದಾರೆ.

‘ಶುಶ್ರೂಷಕಿ ಹಾಗೂ ಶಿಕ್ಷಕಿಯರಾಗಿ ಕೆಲಸ ಮಾಡಲು ಹಾಸನ, ಹೈದರಾಬಾದ್, ಕೇರಳದ ಮಹಿಳೆಯರು ಏಜೆನ್ಸಿಯೊಂದರ ಮೂಲಕ ಕತಾರ್‌ಗೆ ಹೋಗಿದ್ದರು. ಅವರನ್ನು ಕತಾರ್ ನಿವಾಸಿಯೊಬ್ಬರು ಮನೆಯಲ್ಲಿಟ್ಟುಕೊಂಡಿದ್ದರು. ಮನೆ ಕೆಲಸ ಮಾಡುವಂತೆ
ಒತ್ತಾಯಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಮಹಿಳೆಯರು ಮನೆ ಕೆಲಸ ಮಾಡಲು ನಿರಾಕರಿಸಿದ್ದರು. ಅದೇ ಕಾರಣಕ್ಕೆ ಅವರನ್ನು ಗೋದಾಮಿನಲ್ಲಿ ಅಕ್ರಮ ಬಂಧನದಲ್ಲಿಟ್ಟು ಊಟ ನೀಡದೇ ಹಿಂಸಿಸಲಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡಿದ್ದ ಮಹಿಳೆಯರು, ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು.’

ADVERTISEMENT

‘ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ್ದ ಪೊಲೀಸರು, ಮಹಿಳೆಯರ ಬಗ್ಗೆ ಮಾಹಿತಿ ನೀಡಿದ್ದರು. ಇತ್ತ, ಮಹಿಳೆಯರ ಪೋಷಕರು ಸಹ ಕೋರಮಂಗಲದಲ್ಲಿರುವ ವಲಸಿಗರ ರಕ್ಷಣಾ ಕೇಂದ್ರಕ್ಕೆ ದೂರು ನೀಡಿದ್ದರು. ಕೇಂದ್ರದ ಅಧಿಕಾರಿಗಳೇ ಮಹಿಳೆಯರನ್ನು ವಾಪಸು ಕರೆದುಕೊಂಡು ಬಂದು ಅವರ ಮನೆಗಳಿಗೆ ಕಳುಹಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ನೂತನ ಕೇಂದ್ರ: ‘ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕುವ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸು ಕರೆ ತರುವ ಉದ್ದೇಶದಿಂದ ಕೋರಮಂಗಲದಲ್ಲಿ ವಲಸಿಗರ ರಕ್ಷಣಾ ಕೇಂದ್ರ ಸ್ಥಾಪಿಸಲಾಗಿದೆ’ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.

ನೂತನ ಕೇಂದ್ರ
‘ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕುವ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸು ದೇಶಕ್ಕೆ ಕರೆತರುವ ಉದ್ದೇಶದಿಂದ ಕೋರಮಂಗಲದಲ್ಲಿ ನೂತನವಾಗಿ ವಲಸಿಗರ ರಕ್ಷಣಾ ಕೇಂದ್ರ ಸ್ಥಾಪಿಸಲಾಗಿದೆ’ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.