ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬಹುರಾಷ್ಟ್ರೀಯ ಕಂಪನಿ ಟಿ.ಇ. ಕನೆಕ್ಟಿವಿಟಿ ಇಂಡಿಯಾ ಪ್ರೈವೆಟ್ ಲಿಮಿಟೆಡ್ನಲ್ಲಿ ಕೆಲಸವೂ ನೀಡದೇ ವೇತನವನ್ನೂ ನೀಡದೇ 262 ಕಾರ್ಮಿಕರನ್ನು ಬೀದಿಗೆ ತಳ್ಳಲಾಗಿದೆ. ಇವರಿಗೆ ಕೂಡಲೇ ಕೆಲಸ ಕೊಡಬೇಕು ಎಂದು ಟೈಕೋ ಎಲೆಕ್ಟ್ರಾನಿಕ್ಸ್ ಎಂಪ್ಲಾಯೀಸ್ ಯೂನಿಯನ್ ಆಗ್ರಹಿಸಿದೆ.
ಯೂನಿಯನ್ ಅಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ರಂಗನಾಥ ಬಿ. ಮತ್ತು ಕಾನೂನು ಸಲಹೆಗಾರ ಕೆ.ಎ.ಗಂಗಣ್ಣ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಕಂಪನಿಯಲ್ಲಿ 2011ರಲ್ಲಿ 607 ಜನ ಕಾಯಂ ಕಾರ್ಮಿಕರಿದ್ದು, 1500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು, ಅಷ್ಟೇ ಪ್ರಮಾಣದಲ್ಲಿ ಮೇಲ್ವಿಚಾರಕರು, ಎಂಜಿನಿಯರ್ ಹಾಗೂ ಮೇಲ್ಪಟ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು. ಕಂಪನಿಯು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿತ್ತು. ಲಾಭದಾಯಕವಾಗಿರುವಾಗಲೇ ಕಾಯಂ ಕಾರ್ಮಿಕರನ್ನು ಮನೆಗೆ ಕಳುಹಿಸಲು ಆಡಳಿತ ಮಂಡಳಿ ಆರಂಭಿಸಿತು’ ಎಂದು ಆರೋಪಿಸಿದರು.
‘ಸ್ವಯಂ ನಿವೃತ್ತಿ ಯೋಜನೆಯಡಿ ಮೂರು ಹಂತದಲ್ಲಿ ಕಾರ್ಮಿಕರು ಕೆಲಸ ಕಳೆದುಕೊಂಡರು. ಸ್ವಯಂ ನಿವೃತ್ತಿ ಪಡೆಯಲು ಒಪ್ಪದ 262 ಕಾರ್ಮಿಕರಿಗೆ ಕೆಲಸ ನೀಡದೇ ಮನೆಯಲ್ಲೇ ಇರಿ ವೇತನ ನೀಡುತ್ತೇವೆ ಎಂದು ಕಂಪನಿಯ ಒಳಗೆ ಪ್ರವೇಶ ನಿರಾಕರಿಸಿತು. 2024ರಲ್ಲಿ ಇಲ್ಲಿನ ಕಂಪನಿ ಮುಚ್ಚಿ, ಧಾರವಾಡದಲ್ಲಿ ಆರಂಭಿಸಲಾಗಿದೆ ಎಂದು ಸುಳ್ಳು ಹೇಳಿ ಅಲ್ಲಿಗೆ ಎಲ್ಲರನ್ನೂ ಕಳುಹಿಸಿತು. ಧಾರವಾಡದಲ್ಲಿ ತರಬೇತಿಯ ಹೆಸರಲ್ಲಿ ಸಿನಿಮಾ ತೋರಿಸಿದರೇ ವಿನಃ ಕಂಪನಿಯನ್ನು ತೋರಿಸಲಿಲ್ಲ. ಮತ್ತೆ ಮನೆಯಲ್ಲೇ ಕೂರಿಸಿತು. 2025ರ ಮೇಯಿಂದ ವೇತನ ನೀಡಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.
ಈಗಾಗಲೇ ಈ ಬಗ್ಗೆ ಕಾರ್ಮಿಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಕಾರ್ಮಿಕರಿಗೆ ಬಾಕಿ ವೇತನ ನೀಡಬೇಕು. ಕೆಲಸ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.