ADVERTISEMENT

ರವಿ ಚನ್ನಣ್ಣನವರ ಹೆಸರು ಬಳಸಿ ‘ಆಶ್ರಯ’ ಮನೆ ಆಮಿಷವೊಡ್ಡಿ ವಂಚನೆ: ಅರ್ಚಕ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 21:25 IST
Last Updated 26 ಜುಲೈ 2021, 21:25 IST

ಬೆಂಗಳೂರು: ಸರ್ಕಾರದಿಂದ ಆಶ್ರಯ ಯೋಜನೆಯಡಿ ಮನೆಗಳನ್ನು ಕೊಡಿ ಸುವ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ಅರ್ಚಕ ಮಂಜುನಾಥ್ ಸೇರಿ ನಾಲ್ವರನ್ನು ಸುಬ್ರಹ್ಮಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ವಂಚನೆಗೀಡಾಗಿರುವ ಬಾಲಾಜಿ ಕುಮಾರ್ ಎಂಬುವರು ದೂರು ನೀಡಿ ದ್ದಾರೆ. ಅದನ್ನು ಆಧರಿಸಿ ಮಂಜು ನಾಥ್ ಹಾಗೂ ಅವರ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆಂಜನೇಯಸ್ವಾಮಿ ದೇವಾಲ ಯದ ಅರ್ಚಕ ಮಂಜುನಾಥ್, ತಮ್ಮ ಬಳಿ ಬರುವ ಜನರಿಗೆ ಮನೆ ಕೊಡಿಸುವ ಆಮಿಷವೊಡ್ಡುತ್ತಿದ್ದರು. ಮನೆ ಮಂಜೂರಾತಿಗೆ ಸ್ವಲ್ಪ ಹಣ ಖರ್ಚಾಗುವುದಾಗಿ ಹೇಳಿ ಜನರಿಂದ ಪಡೆದುಕೊಳ್ಳುತ್ತಿದ್ದರು. ಅದಾದ ನಂತರ ಯಾವುದೇ ಮನೆಗಳನ್ನು ಕೊಡಿಸಿಲ್ಲ. ಹಣವನ್ನೂ ವಾಪಸು ನೀಡಿಲ್ಲವೆಂಬುದು ಗೊತ್ತಾಗಿದೆ’ ಎಂದೂ ತಿಳಿಸಿವೆ.

ADVERTISEMENT

ಐಪಿಎಸ್ ಅಧಿಕಾರಿ, ರಾಜಕಾರಣಿಗಳ ಜೊತೆ ಫೋಟೊ: ‘ಮಂಜುನಾಥ್, ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಜೊತೆ ಫೋಟೊ ತೆಗೆಸಿ ಕೊಳ್ಳುತ್ತಿದ್ದರು. ಅದೇ ಫೋಟೊಗಳನ್ನು ಜನರಿಗೆ ತೋರಿಸಿ, ‘ನಾನು ಐಪಿಎಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಸಂಬಂಧಿ’ ಎನ್ನುತ್ತಿದ್ದರು. ಅದನ್ನು ನಂಬಿ, ಜನ ಹಣ ಕೊಟ್ಟಿದ್ದರು. ಈ ಬಗ್ಗೆಯೂ ದೂರುದಾರ ಮಾಹಿತಿ ನೀಡಿ ದ್ದಾರೆ’ ಎಂದೂ ಮೂಲಗಳು ಹೇಳಿವೆ.

ವಂಚನೆಗೆ ರವಿ ಚನ್ನಣ್ಣನವರ ಹೆಸರು ಬಳಕೆ

‘ಸಿಐಡಿ ಎಸ್ಪಿ ಆಗಿರುವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ, ಈ ಹಿಂದೆ ಮೈಸೂರು ಜಿಲ್ಲಾ ಎಸ್ಪಿ ಆಗಿದ್ದರು. ಅದೇ ಸಂದರ್ಭದಲ್ಲೇ ಅವರ ಜೊತೆ ಮಂಜುನಾಥ್ ಫೋಟೊ ತೆಗೆಸಿಕೊಂಡಿದ್ದರು. ಅದೇ ಫೋಟೊವನ್ನು ಜನರಿಗೆ ತೋರಿಸುತ್ತಿದ್ದ ಆರೋಪಿ, ‘ರವಿ ಚನ್ನಣ್ಣನವರ ಅವರ ತಮ್ಮ ನಾನು’ ಎಂದು ಹೇಳಿ ಜನರನ್ನು ನಂಬಿಸುತ್ತಿದ್ದರು’ ಎಂದೂ ದೂರುದಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.