ಬೆಂಗಳೂರು: ಕ್ಯಾನ್ಸರ್ಗೆ ಚಿಕಿತ್ಸೆಗೆ ಬಳಸುವ ಗಿಡ ಮೂಲಿಕೆಯೊಂದರ ಔಷಧ ನೀಡುವುದಾಗಿ ಉದ್ಯಮಿಯೊಬ್ಬರಿಂದ ₹36.75 ಲಕ್ಷ ಪಡೆದು, ವಂಚಿಸಿರುವ ಪ್ರಕರಣ ನಡೆದಿದೆ.
ಪಟ್ಟಣಗೆರೆ ಉದ್ಯಮಿ ರಾಹುಲ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಮೋಹನ್ ಕುಮಾರ್ ಎಂಬಾತನ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ರಾಹುಲ್ ಸಂಬಂಧಿಯೊಬ್ಬರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಸ್ನೇಹಿತರೊಬ್ಬರ ಮೂಲಕ ಕಳೆದ ವರ್ಷ ಮೋಹನ್ ಪರಿಚಯವಾಗಿದ್ದ. ತಾನು ಕೃಷಿಕ, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಬೇರನ್ನು ಕಸಿ ಮಾಡಿ ಕೊಡುತ್ತೇನೆ ಎಂದು ನಂಬಿಸಿದ್ದ ಆರೋಪಿ, ಔಷಧಕ್ಕೆ ಹಣ ಖರ್ಚಾಗುತ್ತದೆ ಎಂದು ಹಂತ ಹಂತವಾಗಿ ಒಟ್ಟು₹36.75 ಲಕ್ಷ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ’.
‘ಬಳಿಕ ಔಷಧವೂ ನೀಡದೆ, ಮೋಹನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ವಿಚಾರಿಸಲು ಹೋದಾಗ ಆತ ಮನೆ ಖಾಲಿ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ವಂಚನೆಗೆ ಒಳಗಾಗಿರುವ ವಿಚಾರ ತಿಳಿದು, ವಂಚಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.