ADVERTISEMENT

ಬಿಡಿಎ ಅಧಿಕಾರಿ ಸೋಗಿನಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 20:45 IST
Last Updated 20 ಮೇ 2020, 20:45 IST

ಬೆಂಗಳೂರು: ನಿವೇಶನ ಕೊಡಿಸುವುದಾಗಿ ಹೇಳಿಕೊಂಡು ಬಿಡಿಎ ಅಧಿಕಾರಿ ಸೋಗಿನಲ್ಲಿ ಬ್ಯಾಂಕ್ ಅಧಿಕಾರಿಯನ್ನು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಅರ್ಜಿ ಶುಲ್ಕವೆಂದು ₹ 75 ಸಾವಿರ ಪಡೆದು ವಂಚಿಸಿದ್ದಾನೆ.

ಅಗ್ರಹಾರ ದಾಸರಹಳ್ಳಿ ನಿವಾಸಿ ಶೇಖರ್ ಬಾಬು ವಂಚನೆಗೊಳಗಾದವರು. ಅವರು ನೀಡಿದ ದೂರಿನ ಅನ್ವಯ ಕೆ.ಎಂ. ನಾಯ್ಡು ಎಂಬಾತನ ವಿರುದ್ಧ ಮಲ್ಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಲ್ಲೇಶ್ವರದಲ್ಲಿರುವ ಖಾಸಗಿ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಶೇಖರ್ ಬಾಬು ಕೆಲಸ ಮಾಡಿಕೊಂಡಿದ್ದಾರೆ. ಏ. 26ರಂದು ಬ್ಯಾಂಕಿಗೆ ಹೋಗಿದ್ದ ನಾಯ್ಡು ಎಂಬಾತ ಬಿಡಿಎ ಮುಖ್ಯ ಹಣಕಾಸು ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಈತ, ‘ನನ್ನ ಚಿಕ್ಕಮ್ಮ ಅಮೆರಿಕದಲ್ಲಿ ನೆಲೆಸಿದ್ದು, ₹ 6.50 ಕೋಟಿ ಆಸ್ತಿ ಮಾರಾಟ ಮಾಡಿದ್ದಾರೆ. ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಾರೆ’ ಎಂದು ಹೇಳಿದ್ದ.

ADVERTISEMENT

ಅಲ್ಲದೆ ಅವರ ಬಳಿ, ‘ಬಿಡಿಎ ನಿವೇಶನ ಖರೀದಿಗೆ ಅರ್ಜಿ ನೊಂದಣಿಗೆ ಇವತ್ತೇ ಕೊನೆ ದಿನ’ ಎಂದಿದ್ದ. ಬಳಿಕ ಶೇಖರ್ ಬಾಬುಗೆ, ‘ನಿಮಗೆ ಬಿಡಿಎದಲ್ಲಿ ನಿವೇಶನ ಖರೀದಿಸಲು ಆಸಕ್ತಿ ಇದ್ದರೆ ರಾಜಾಜಿನಗರ ಅಥವಾ ಇಂದಿರಾನಗರದಲ್ಲಿ 30X40 ಅಥವಾ 60X40 ನಿವೇಶನ ಕೊಡಿಸುತ್ತೇನೆ. ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಿ. ಹಣ ಹಂತಹಂತವಾಗಿ ಪಾವತಿಸಿದರೆ ಸಾಕು’ ಎಂದಿದ್ದ.

ಆತನ ಮಾತು ನಂಬಿದ ಶೇಖರ್ ಬಾಬು, ₹ 75 ಸಾವಿರ ಕೊಟ್ಟಿದ್ದಾರೆ. ಅಲ್ಲದೆ, ಬಿಡಿಎ ನಿವೇಶನ ಕಾಯ್ದಿರಿಸಲು ಅರ್ಜಿ ಸಲ್ಲಿಸಿದ್ದರು. ಬಳಿಕ ತನ್ನನ್ನು ಸಂಪರ್ಕಿಸುವಂತೆ ಮೊಬೈಲ್ ನಂಬರ್ ಕೊಟ್ಟು ಹೋದ ನಾಯ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.