ADVERTISEMENT

ಹಣದ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳ: ಜೋಡಿ ಕೊಲೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 2:36 IST
Last Updated 19 ನವೆಂಬರ್ 2019, 2:36 IST

ಬೆಂಗಳೂರು: ಪಾನಮತ್ತ ಸ್ನೇಹಿತರ ಮಧ್ಯೆ ಹಣದ ವಿಷಯದಲ್ಲಿ ಉಂಟಾದ ಜಗಳ ಇಬ್ಬರ ಕೊಲೆಯಲ್ಲಿ ಪರ್ಯಾವಸಾನಗೊಂಡ ಘಟನೆ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಉತ್ತರಹಳ್ಳಿಯ ಅಬ್ಬಯ್ಯಸ್ವಾಮಿ ಲೇಔಟ್ ನಿವಾಸಿಗಳಾದ ಸುಬ್ರಮಣಿ (35) ಮತ್ತು ಸಂತೋಷ್‌ ಅಲಿಯಾಸ್ ಪಿಳ್ಳೈ (38) ಕೊಲೆಯಾದವರು. ಘಟನೆ ಸಂಬಂಧ ಆರೋಪಿ ಮಹಾವೀರ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದರು.

ಸುಬ್ರಮಣಿ ಮತ್ತು ಸಂತೋಷ್‌ ಮದ್ಯವ್ಯಸನಿಗಳಾಗಿದ್ದು, ಪತ್ನಿಯಿಂದಪ್ರತ್ಯೇಕವಾಗಿದ್ದಾರೆ. ಎಲ್ಲರೂ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಭುವನೇಶ್ವರಿ ನಗರದ ಶನಿ ಮಹಾತ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ಸುಬ್ರಮಣಿ, ಸಂತೋಷ್‌, ಮಹಾವೀರ್ ಮತ್ತು ತಲೆಮರೆಸಿಕೊಂಡಿರುವ ರವಿ ಮದ್ಯ ಖರೀದಿಸಿ ಭಾನುವಾರ ಸಂಜೆ ಆರು ಗಂಟೆಯಿಂದ ಪಾರ್ಟಿ ಮಾಡುತ್ತಿದ್ದರು. ಇದಕ್ಕೂ ಮೊದಲು ನಾಲ್ವರು ಸ್ನೇಹಿತರು ಪೇಂಟಿಂಗ್ ಕೆಲಸ ಮಾಡುವ ಮಾಲೀಕನಿಂದ ಹಣ ಪಡೆದಿದ್ದರು. ಹಣ ಹಿಂದಿರುಗಿಸುವಾಗ ಬಗ್ಗೆ ಭಾನುವಾರ ಸ್ನೇಹಿತರ ಜತೆ ಚರ್ಚೆ ಆರಂಭವಾಗಿದೆ.

ADVERTISEMENT

ಹಣದ ವಿಷಯದಲ್ಲಿ ಸುಬ್ರಮಣಿ ಮತ್ತು ಸಂತೋಷ್ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಹಾಲೋ ಬ್ರಿಕ್ಸ್ ಇಟ್ಟಿಗೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಳಗೆ ಬಿದ್ದ ಸುಬ್ರಮಣಿ ಮೇಲೆ ಕಲ್ಲು ಎತ್ತಿ ಹಾಕಿ ಸಂತೋಷ್‌ ಹತ್ಯೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಇತರ ಇಬ್ಬರು, ಸಂತೋಷ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.