ADVERTISEMENT

ಕುಡಿಯುವ ನೀರಿಗೆ ಅನುದಾನ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 19:22 IST
Last Updated 18 ಜನವರಿ 2019, 19:22 IST
ನೀರಿನ ಟ್ಯಾಂಕ್
ನೀರಿನ ಟ್ಯಾಂಕ್   

ಬೆಂಗಳೂರು: ರಾಜ್ಯದ ವಿವಿಧೆಡೆ ತಲೆದೋರಿರುವ ಬರಗಾಲ ಪರಿಸ್ಥಿತಿಯಿಂದಾಗಿ ಕುಡಿಯುವ ನೀರಿಗೂ ತೊಂದರೆ ಉಂಟಾಗಿದ್ದು, ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಟಾಸ್ಕ್‌ ಫೋರ್ಸ್‌ಗಳಿಗೆ ಅನುದಾನ ಬಿಡುಗಡೆ ಮಾಡಿದೆ.

2018– 19 ನೇ ಸಾಲಿನಲ್ಲಿ ಮಳೆ ಕೊರತೆ ಉಂಟಾಗಿದ್ದು ಮುಂಗಾರು ಹಂಗಾಮಿನಲ್ಲಿ 100 ಹಾಗೂ ಹಿಂಗಾರು ಹಂಗಾಮಿನಲ್ಲಿ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಡಿಸೆಂಬರ್‌ನಲ್ಲಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರ ಅಧ್ಯಕ್ಷತೆ
ಯಲ್ಲಿ ನಡೆದ ಸಂಪುಟ ಉಪ ಸಮಿತಿಯ ಎರಡು ಸಭೆಯಲ್ಲಿ ನಿರ್ಣಯಿಸಿದಂತೆ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

ಬರಪೀಡಿತ ತಾಲೂಕುಗಳಿಗೆ ತಲಾ ₹ಕೋಟಿ, ಬರಪೀಡಿತ ಎಂದು ಘೋಷಣೆಯಾಗದ ತಾಲೂಕುಗಳಿಗೆ ₹ 25 ಲಕ್ಷ ಬಿಡುಗಡೆ ಆಗಿದೆ. ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ₹50 ಕೋಟಿ ಮಂಜೂರು ಮಾಡಿ ಮೊದಲ ಕಂತಿನಲ್ಲಿ ₹ 25 ಕೋಟಿ ಬಿಡುಗಡೆ ಮಾಡಲಾಗಿದೆ.

ADVERTISEMENT

ಎಸ್‌ಡಿಆರ್‌ಎಫ್‌ ಹಾಗೂ ಎನ್‌ಡಿಆರ್‌ಎಫ್‌ ಅನುದಾನದಿಂದ ಬಿಡುಗಡೆ ಮಾಡಿರುವ ಹಣವನ್ನು ಮಾರ್ಗಸೂಚಿ ಪ್ರಕಾರ ಕುಡಿಯುವ ನೀರಿಗೆ ಬಳಸುವಂತೆ ಸೂಚಿಸಲಾಗಿದೆ. ಅಲ್ಲದೆ, ಮುಂಗಾರು, ಹಿಂಗಾರು ಕೈಕೊಟ್ಟಿದ್ದರಿಂದ ಪರಿಸ್ಥಿತಿ ಗಂಭೀರವಾಗಿರುವುದರಿಂದ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಹಾಕಿರುವ 90 ದಿನಗಳ ಗಡುವನ್ನು ಸಡಿಲಗೊಳಿಸಲಾಗಿದ್ದು, ಮೇ ಅಂತ್ಯದವರೆಗೆ ಜನ, ಜಾನುವಾರುಗಳಿಗೆ ನೀರು ಪೂರೈಸಲು ಆದೇಶಿಸಲಾಗಿದೆ.

ನೀರು ಪೂರೈಕೆ ಬಿಲ್ಲಿನ ಹಣವನ್ನು 15 ದಿನದೊಳಗೆ ಪಾವತಿಸಬೇಕು. ಇದರಲ್ಲಿ ಯಾವುದೇ ಅಕ್ರಮಕ್ಕೂ ಅವಕಾಶ ಇಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.