ಬೆಂಗಳೂರು: ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿ.ನಾ.ಕು. ಪ್ರಶಸ್ತಿ ಪ್ರದಾನ ಮಾಡಲಾಯಿತು.
ಖ್ಯಾತ ವಕೀಲ ಸಿ.ಎಚ್. ಹನುಮಂತರಾಯ,ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ, ವೈದ್ಯರಾದ ಡಾ.ಬಿ.ಆರ್. ಕಿಶೋರ್, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ಅವರು ಈ ಬಾರಿಯ ಪ್ರಶಸ್ತಿ ಪುರಸ್ಕೃತರು. ಸಿ.ಎಚ್. ಹನುಮಂತರಾಯ ಮತ್ತು ಬಿ.ಬಿ. ಅಶೋಕ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ, ‘ಜಿ. ನಾರಾಯಣಕುಮಾರ್ ಅವರು ನಾಡು ಕಂಡ ಅಪರೂಪದ ರಾಜಕಾರಣಿ ಮತ್ತು ಕನ್ನಡ ಪರ ಹೋರಾಟಗಾರರು’ ಎಂದು ಸ್ಮರಿಸಿದರು.
‘ಕನ್ನಡ ಭಾಷೆ ಮತ್ತು ನಾಡಿಗೆ ಸಂಕಷ್ಟ ಬಂದಾಗ ಜಿ.ನಾರಾಯಣಕುಮಾರ್ ಅವರು ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಕನ್ನಡಕ್ಕೆ ವ್ಯಕ್ತಿಯಾಗಿ ಮತ್ತು ಶಕ್ತಿಯಾಗಿ ಅವರು ದುಡಿದ್ದಾರೆ’ ಎಂದು ನೆನಪಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ,‘ನಾಡು–ನುಡಿ ವಿಷಯದಲ್ಲಿ ಜಿ. ನಾರಾಯಣಕುಮಾರ್ ಅವರು ಸದಾ ದಿಟ್ಟತನ ಪ್ರದರ್ಶಿಸುತ್ತಿದ್ದರು’ ಎಂದರು.
ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.