ಬೆಂಗಳೂರು: ಸರಳ ಜೀವನ, ಸತ್ಯ ಮತ್ತು ಅಹಿಂಸೆ ಮಾರ್ಗದ ಮೂಲಕ ವಿಶ್ವದ ಮೂಲೆ ಮೂಲೆ ತಲುಪಿದವರು ಮಹಾತ್ಮ ಗಾಂಧೀಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಗಾಂಧಿಭವನದಲ್ಲಿ ನಡೆದ ಗಾಂಧಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ, ‘ದೇಶಕ್ಕೆ ಗಾಂಧಿ ಒಬ್ಬರೇ ಮಹಾತ್ಮ ಮತ್ತು ಪಿತಾಮಹ. ಯಾವುದೇ ಪ್ರಚಾರದ ಸಾಮಗ್ರಿ, ತಂತ್ರಜ್ಞಾನ ಇಲ್ಲದೆಯೇ ಜನರ ಮನಸ್ಸುಗಳನ್ನು ಮುಟ್ಟಿದ್ದರು’ ಎಂದು ನೆನಪು ಮಾಡಿಕೊಂಡರು.
ನುಡಿದಂತೆ ನಡೆದವರು ಗಾಂಧೀಜಿ. ಅವರ ದಾರಿಯಲ್ಲಿ ಸ್ವಲ್ಪವಾದರೂ ನಾವು ಸಾಗಲು ಪ್ರಯತ್ನಿಸಬೇಕು. ಅದೇ ಗಾಂಧೀಜಿಗೆ ಸಲ್ಲಿಸುವ ಗೌರವ ಎಂದರು.
ಇಂದೇ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನ್ಮ ದಿನ ಕೂಡ ಆಗಿದೆ. ಶಾಸ್ತ್ರಿ ಅವರು ಗಾಂಧೀಜಿಯ ಅನುಯಾಯಿಯಾಗಿದ್ದರು. ಅವರು ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಅವರು ಬಿಟ್ಟು ಹೋಗಿರುವ ಮಾಲ್ಯಗಳನ್ನು ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಾಂಧಿ ಭವನದಲ್ಲಿ ಇರುವ ಗಾಂಧಿ ಕುರಿತ ಪುಸ್ತಕಗಳನ್ನು ಯುವ ಜನರಿಗೆ ಆನ್ಲೈನ್ನಲ್ಲಿ ಓದುವ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಜಾಲತಾಣಕ್ಕೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಚಾಲನೆ ನೀಡಿದರು.
ಗಾಂಧೀಜಿ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟುಹಾಕುವರ ಮತ್ತು ಅವರನ್ನು ಅವಮಾನಿಸುವರ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಚಿಂತನೆ ನಡೆಸಿದೆ.- ಎಚ್.ಕೆ. ಪಾಟೀಲ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ
ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಂ ಮುರಿಗೆಪ್ಪ ಅವರ ‘ಅಹಿಂಸಾ ಪ್ರತಿಪಾದಕ ಹುತಾತ್ಮ ಮೈಲಾರ ಮಹಾದೇವ’ ಕೃತಿಗೆ ಜಯಲಕ್ಷ್ಮಿ ಶ್ರೀನಿವಾಸಯ್ಯ ದತ್ತಿ ಸಾಹಿತ್ಯ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರಾದ ಕೆ.ಸಿ. ನಾರಾಯಣಪ್ಪ, ಎಸ್.ವಿ.ಟಿ. ಗುಪ್ತ, ಎಚ್.ಎಸ್. ಹನುಮಂತರಾವ್ ಮತ್ತು ರಘುನಾಥ್ ರಾವ್ ಎನ್. ಅವರುಗಳನ್ನು ಸನ್ಮಾನಿಸಲಾಯಿತು. ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.