ಬೆಂಗಳೂರು: ಜ್ಞಾನಭಾರತಿ ಆವರಣದಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ 2012ರಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ಆರೋಪಿಗಳಿಗೆ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿದೆ.
‘ಅತ್ಯಾಚಾರವು ಸಂತ್ರಸ್ತ ಯುವತಿ ವಿರುದ್ಧದ ಅಪರಾಧ ಪ್ರಕರಣ ಮಾತ್ರವಲ್ಲ, ಇಡೀ ಸಮಾಜಕ್ಕೇ ವಿರುದ್ಧವಾದ ಅಪರಾಧ’ ಎಂದು ತಿಳಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ಧ ವಿಭಾಗೀಯ ಪೀಠ, ಶಿಕ್ಷೆ ರದ್ದುಗೊಳಿಸಲು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತು.
2012ರ ಅ.13ರಂದು ರಾತ್ರಿ 9.30ರ ಸುಮಾರಿನಲ್ಲಿ ಗೆಳೆಯನೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಸುತ್ತುವರಿದ 7 ಮಂದಿ ಮಾರಕಾಸ್ತ್ರಗಳನ್ನು ತೋರಿಸಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ಅಪರಾಧಿಗಳಾದ ರಾಮು, ಶಿವಣ್ಣ, ಮದ್ದೂರ, ಎಲೆಯಯ್ಯ, ಈರಯ್ಯ, ರಾಜ ಮತ್ತು ದೊಡ್ಡ ಈರಯ್ಯ ಏಳು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ‘ನಮ್ಮ ವಿರುದ್ಧ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂಬುದನ್ನು ಪರಿಗಣಿಸಿ ಮೃದು ಧೋರಣೆ ತೋರಿಸಬೇಕು’ ಎಂದು ಅಪರಾಧಿಗಳು ಕೋರಿದ್ದರು.
‘ಆಪಾದಿತರು ಕೃತ್ಯ ನಡೆಸಿದ ಸ್ಥಳದಲ್ಲಿ ಬಿಟ್ಟು ಹೋಗಿದ್ದ ಕರವಸ್ತ್ರವೇ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಪ್ರಮುಖ ಸಾಕ್ಷ್ಯವಾಗಿದೆ. ಕರವಸ್ತ್ರ ಸಂತ್ರಸ್ತೆಯ ಪಾಲಿಗೆ ‘ಸುದರ್ಶನ ಚಕ್ರ’ ಆಯಿತು’ ಎಂದು ಪೀಠ ಅಭಿಪ್ರಾಯಪಟ್ಟಿತು.
ಮನುಸ್ಮೃತಿ ಉಲ್ಲೇಖ
160 ಪುಟಗಳ ಆದೇಶದಲ್ಲಿ ಹಲವು ಕಡೆ ಮನುಸ್ಮೃತಿ ಮತ್ತು ವೇದದಲ್ಲಿನ ಶ್ಲೋಕಗಳನ್ನು ಪೀಠ ದಾಖಲಿಸಿದೆ.
‘ಮಹಿಳೆಯರನ್ನು ಗೌರವಿಸದಿದ್ದಲ್ಲಿ ಎಲ್ಲಾ ಆಚರಣೆಗಳೂ ವ್ಯರ್ಥವಾಗುತ್ತವೆ. ಮಹಿಳೆ ಸಂತಸದಿಂದ ಇರದ ಕುಟುಂಬ ಬಹುಬೇಗ ನಾಶವಾಗುತ್ತದೆ. ಮಹಿಳೆ ಸಂತಸದಿಂದ ಇರುವ ಕುಟುಂಬ ಸದಾ ಏಳಿಗೆ ಕಾಣುತ್ತದೆ’ ಎಂಬ ಮನುಸ್ಮೃತಿಯ ಸಾಲುಗಳನ್ನು ಪೀಠ ಉಲ್ಲೇಖಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.