ADVERTISEMENT

ಕಾರ್ಮಿಕರ ವಜಾ: ಗಾರ್ಮೆಂಟ್ಸ್‌ ಕಂಪನಿ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 20:26 IST
Last Updated 9 ಜೂನ್ 2020, 20:26 IST
ಕಂಪನಿ ಎದುರು ಪ್ರತಿಭಟಿಸುತ್ತಿರುವ ಕಾರ್ಮಿಕರು
ಕಂಪನಿ ಎದುರು ಪ್ರತಿಭಟಿಸುತ್ತಿರುವ ಕಾರ್ಮಿಕರು   

ಪೀಣ್ಯ ದಾಸರಹಳ್ಳಿ: 70ಕ್ಕೂ ಹೆಚ್ಚು ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದ ಕಾರಣ ಇಲ್ಲಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್‌ ಕಂಪನಿ ವಿರುದ್ಧ 240ಕ್ಕೂ ಹೆಚ್ಚು ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಈ ಪೈಕಿ, 200ಕ್ಕೂ ಹೆಚ್ಚು ಮಹಿಳೆಯರೇ ಇದ್ದರು.

‘ನಷ್ಟ ಸಂಭವಿಸುತ್ತಿದೆ ಎಂಬ ನೆಪವೊಡ್ಡಿ ಬ್ರಾಂಡಿಸ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪನಿಯು ನೌಕರರಿಂದ ಬಲವಂತವಾಗಿ ರಾಜೀನಾಮೆ ಪಡೆಯುತ್ತಿದೆ. ನಾವೆಲ್ಲರೂ ಹೆಚ್ಚು ಕೆಲಸ ಮಾಡಲು ಸಿದ್ಧವಿದ್ದೇವೆ. ಆದರೂ, ಮೂರು ತಿಂಗಳಿನಿಂದ ನಮಗೆ ಸಂಬಳ ನೀಡಿಲ್ಲ. ನೌಕರರನ್ನೂ ಕೆಲಸದಿಂದ ತೆಗೆಯಲಾಗುತ್ತಿದೆ’ ಎಂದು ನೌಕರ ದೀಪಕ್‌ ದೂರಿದರು.

‘ಕಂಪನಿಯಲ್ಲಿ ನಾಲ್ಕೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈಗ ಕೆಲಸ ಇಲ್ಲ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಮೂರು ತಿಂಗಳು ಸಂಬಳವನ್ನೂ ಕೊಟ್ಟಿಲ್ಲ. ಜೀವನ ನಡೆಸಲು ಕಷ್ಟವಾಗಿದೆ’ ಎಂದು ಭಾಗ್ಯ ಅಳಲು ತೋಡಿಕೊಂಡರು.

ADVERTISEMENT

ಕಂಪನಿಯ ವ್ಯವಸ್ಥಾಪಕ ನಾಗಭೂಷಣ್‌, ‘ನೌಕರರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಅವರೇ ಈಗ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಎರಡು ತಿಂಗಳು ಸಂಬಳ ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.