ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಹೃಷಿಕೇಶ್ ಅಲಿಯಾಸ್ ಮುರುಳಿ (44), ಸಿಪಿಐ ಮುಖಂಡ ಗೋವಿಂದ್ ಪನ್ಸಾರೆ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಯೇ ಎಂದು ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಜಾರ್ಖಂಡ್ನ ಪುಸ್ತಕ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹೃಷಿಕೇಶ್ನನ್ನು ಗುರುವಾರ. ಬಂಧಿಸಲಾಗಿದೆ. ಗೌರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯ ಸಹಚರರಲ್ಲಿ ಒಬ್ಬನಾಗಿರುವ ಈತ ಯಾರನ್ನು ಹತ್ಯೆ ಮಾಡಬೇಕು ಹಾಗೂ ಹೇಗೆ ಹತ್ಯೆ ಮಾಡಬೇಕು ಎಂಬ ಸಂಚು ರೂಪಿಸುತ್ತಿದ್ದ. ಅದಕ್ಕೆ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಪನ್ಸಾರೆ, ನರೇಂದ್ರ ಧಾಬೋಲ್ಕರ್ ಹಾಗೂ ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ಪ್ರಕರಣ ಕುರಿತು ಬಂಧಿತನಿಂದ ಮಾಹಿತಿ ಸಿಗಬಹುದೇ ಎಂದು ಪೊಲೀಸರು ಹುಡುಕುತ್ತಿದ್ದಾರೆ. ಮೂಲತಃ ಮಹಾರಾಷ್ಟ್ರದ ಔರಂಗಬಾದ್ನವನಾದ ಹೃಷಿಕೇಶ್ ಸಾಂಗ್ಲಿ, ಸಿಂಧೂದುರ್ಗ ಹಾಗೂ ಬೆಳಗಾವಿಗಳಲ್ಲಿ ಸಂಪರ್ಕ ಹೊಂದಿದ್ದಾನೆ. ಬಹಳಷ್ಟು ಯುವಕರನ್ನು ಈತ ತನ್ನ ಸಂಘಟನೆಗೆ ಸೇರ್ಪಡೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಗೌರಿ ಹತ್ಯೆಗೆ ಸಂಚು ರೂಪಿಸಿದ ತಂಡದ ಮತ್ತೊಬ್ಬ ಸದಸ್ಯ ದಾದನಿಗಾಗಿ ಶೋಧಿಸಲಾಗುತ್ತಿದೆ. ಈತ ಪ್ರಕರಣದ 15ನೇ ಆರೋಪಿ
ಯಾಗಿದ್ದು, ಹೃಷಿಕೇಶ್ ವಿಚಾರಣೆಯಿಂದ ಈತನ ಬಗ್ಗೆ ಸುಳಿವು ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.