
ಬೆಂಗಳೂರು: ಗೀತಂ ಡೀಮ್ಡ್ ಟುಬಿ ವಿಶ್ವವಿದ್ಯಾಲಯವು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಸಮಾನತೆ, ಸಬಲೀಕರಣ, ಅಭಿವೃದ್ದಿಗಾಗಿ ವಿಜ್ಞಾನ ಯೋಜನೆಯಡಿ(ಸೀಡ್) ಜೇನುಕುರುಬ ಸಮುದಾಯವರಿಗೆ ಜೇನು ಪೆಟ್ಟಿಗೆ, ಉಪಕರಣಗಳನ್ನು ವಿತರಣೆ ಮಾಡಿದೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯಲ್ಲಿ ನಡೆದ ಸಮಾರಂಭದಲ್ಲಿ ಆಧುನಿಕ ಜೇನು ಸಾಕಾಣಿಕೆ ತರಬೇತಿ ಹಾಗೂ ತಂತ್ರಜ್ಞಾನದ ನೆರವು ಪಡೆದ ಫಲಾನುಭವಿಗಳಿಗೆ 500 ಪೆಟ್ಟಿಗೆ, ಉಪಕರಣಗಳನ್ನು ನೀಡಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜೇನು ಕೃಷಿ ತಜ್ಞ ಕೆ.ಟಿ.ವಿಜಯಕುಮಾರ್ ಹಾಗೂ ಅವರ ತಂಡದವರು ಜೇನು ಗೂಡು ನಿರ್ವಹಣೆ, ರೋಗ ನಿಯಂತ್ರಣ, ಜೇನು ಸಂಸ್ಕರಣೆ ಹಾಗೂ ಮಾರುಕಟ್ಟೆ ತಂತ್ರಗಳ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ಇದೇ ವೇಳೆ ಜೇನು ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯ ಸೌಲಭ್ಯಗಳೊಂದಿಗೆ ಎರಡು ಜೇನು ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲಾಯಿತು.
ಗೀತಂ ವಿ.ವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಐ.ಜೀನಾ ಜಾಕೋಬ್, ಸಹ ಸಂಶೋಧಕರಾದ ಕೆ.ಗೀತಾ, ಟಿ.ಪ್ರಸನ್ನ ವೆಂಕಟೇಶನ್, ಎ.ವಿಶ್ವಭಾರತಿ, ಸುಜಿತ್ ಬಸಕ್, ಡಿ.ನಿರ್ಮಲಾದೇವಿ, ಯೋಜನೆ ಮಾರ್ಗದರ್ಶಕರಾದ ಗೀತಂ ನಿರ್ದೇಶಕ ವಂಶೀಧರ್ ಯಂಡಪಲ್ಲಿ, ಸಂಶೋಧನಾ ಸಮಿತಿ ಅಧ್ಯಕ್ಷ ಕೆ.ಜಿ. ಮೋಹನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.