ಬೆಂಗಳೂರು: ಕೆಲಸಕ್ಕಿದ್ದ ಅಂಗಡಿಗೆ ಸೇರಿದ್ದ ₹50 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ಕದ್ದುಕೊಂಡು ಪರಾರಿಯಾಗಿದ್ದ ಆರೋಪಿ ಅಮರ್ ಮೊಹಂತ್ (33) ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಕೊಲ್ಕತ್ತಾದ ಅಮರ್, ನಗರದ ತಿರುಮಲ ಜ್ಯುವೆಲರ್ಸ್ ಮಳಿಗೆಯಲ್ಲಿ ಕೆಲಸಕ್ಕಿದ್ದ. ಮಾಲೀಕ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡು ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಲ ತಿಂಗಳು ಚೆನ್ನಾಗಿ ಕೆಲಸ ಮಾಡಿದ್ದ ಅಮರ್, ಮಾಲೀಕರ ಮೆಚ್ಚುಗೆ ಗಳಿಸಿದ್ದ. ಆತನನ್ನು ನಂಬಿದ್ದ ಮಾಲೀಕ, ‘ಅಕ್ಕಸಾಲಿಗನ ಬಳಿ ಹೋಗಿ ಚಿನ್ನಾಭರಣ ಮಾಡಿಸಿಕೊಂಡು ಬಾ’ ಎಂದು ₹50 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ಕೊಟ್ಟಿದ್ದರು. ಅದರ ಸಮೇತ ಪರಾರಿಯಾಗಿದ್ದ ಆರೋಪಿ, ಕೊಲ್ಕತ್ತಾಗೆ ಹೋಗಿದ್ದ.’
‘ಆತನ ವಿಳಾಸವನ್ನು ಪತ್ತೆ ಮಾಡಿದ್ದ ವಿಶೇಷ ತಂಡ, ಕೊಲ್ಕತ್ತಾದ ಸೀತಾಪುರ ಗ್ರಾಮಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಕರೆತಂದಿದೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕಾರಣಕ್ಕೆ ಕಳ್ಳತನ ಮಾಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ’ ಎಂದೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.