ಬೆಂಗಳೂರು: ವ್ಯಾಪಾರಿ ಅಕ್ಷಯ್ ದೇವಕರ್ ಎಂಬುವರ ಜ್ಯುವೆಲರಿ ಮಳಿಗೆಯಲ್ಲಿ ಕೆಲಸಕ್ಕಿದ್ದ ರೋಹಿತ್ ಕರಾಟ್ ಅಲಿಯಾಸ್ ವಿಜಯ್ ಎಂಬಾತ 810 ಗ್ರಾಂ ಚಿನ್ನದ ಸಮೇತ ಪರಾರಿಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅಕ್ಷಯ್ ಅವರು ನೀಡಿರುವ ದೂರು ಆಧರಿಸಿ ರೋಹಿತ್ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅಕ್ಷಯ್ ಅವರು ಸ್ನೇಹಿತ ಸೋಮನಾಥ್ ಎಂಬುವರ ಜೊತೆ ಆಭರಣಗಳ ವಹಿವಾಟು ನಡೆಸುತ್ತಿದ್ದರು. ಅವರ ಮೂಲಕವೇ 10 ದಿನಗಳ ಹಿಂದಷ್ಟೇ ರೋಹಿತ್ನ ಪರಿಚಯವಾಗಿತ್ತು. ಆತನಿಗೆ ಕೆಲಸ ನೀಡಿ ಮಳಿಗೆಯಲ್ಲಿ ಇಟ್ಟುಕೊಂಡಿದ್ದರು’
‘ನ. 16ರಂದು ಸೋಮನಾಥ್ ಅವರ ಕಡೆಯಿಂದ ಚಿನ್ನದ ಬಿಸ್ಕತ್ಗಳನ್ನು ತರಲು ರೋಹಿತ್ನನ್ನು ಕಳುಹಿಸಿದ್ದರು. ₹ 28 ಲಕ್ಷ ಮೌಲ್ಯದ 810 ಗ್ರಾಂ ಚಿನ್ನದ ಬಿಸ್ಕತ್ ಪಡೆದಿದ್ದ ರೋಹಿತ್ ಮಳಿಗೆಗೆ ವಾಪಸು ಬಾರದೇ ಪರಾರಿಯಾಗಿರುವುದಾಗಿ ದೂರುದಾರ ಅಕ್ಷಯ್ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.