ADVERTISEMENT

ಮಹಿಳೆ ಸೇರಿ ಇಬ್ಬರ ಬಂಧನ: ₹7.50 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಒಂಟಿ ಮಹಿಳೆಯರು ಇರುತ್ತಿದ್ದ ಅಂಗಡಿಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 16:26 IST
Last Updated 16 ಜೂನ್ 2022, 16:26 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳು
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳು   

ಬೆಂಗಳೂರು: ಒಂಟಿ ಮಹಿಳೆಯರ ಜೊತೆ ಆತ್ಮೀಯವಾಗಿ ಮಾತನಾಡಿ, ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಜ್ಜದ್ ಮಹಮ್ಮದ್ ಅಲಿ (38) ಹಾಗೂ ಮಹಿಳೆ‌ ವೈತ್ಯಾಗಿ (40) ಬಂಧಿತರು. ಇವರಿಂದ ₹ 7.50 ಲಕ್ಷ ಮೌಲ್ಯದ 202 ಚಿನ್ನಾಭರಣ ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಒಂದು ವಾಹನ ಸಜ್ಜದ್ ಹೆಸರಿನಲ್ಲಿದ್ದು, ಇನ್ನೊಂದು ವಾಹನದ ಮಾಲೀಕರು ಪತ್ತೆಯಾಗಿಲ್ಲ. ಈ ವಾಹನವನ್ನೂ ಆರೋಪಿಗಳು ಕಳ್ಳತನ ಮಾಡಿರುವ ಅನುಮಾನವಿದೆ’ ಎಂದು ಪೊಲೀಸರು ಹೇಳಿದರು.

‘ಬಸವೇಶ್ವರನಗರದಲ್ಲಿರುವ ಡ್ರೈ ಪ್ರೂಟ್ಸ್ ಅಂಗಡಿಯೊಂದಕ್ಕೆ ಮೇ 21ರಂದು ಗ್ರಾಹಕರ ಸೋಗಿನಲ್ಲಿ ಹೋಗಿದ್ದ ಆರೋಪಿಗಳು, ಅಲ್ಲಿದ್ದ ಒಂಟಿ ಮಹಿಳೆಯನ್ನು ಆತ್ಮೀಯವಾಗಿ ಮಾತನಾಡಿಸಿದ್ದರು. ತಮ್ಮ ಚಿನ್ನಾಭರಣ ಅಂಗಡಿ ಇರುವುದಾಗಿಯೂ ಹೇಳಿದ್ದರು. ಮಹಿಳೆ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ನೋಡಿ, ವಿನ್ಯಾಸ ಚೆನ್ನಾಗಿದೆ ಎಂದು ಹೊಗಳಿದ್ದರು.’

ADVERTISEMENT

‘ಮಾಂಗಲ್ಯ ಸರದ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಆರೋಪಿ ವೈತ್ಯಾಗಿ, ‘ಇಂಥದ್ದೇ ಸರ ಮಾಡಿಸಬೇಕಿದೆ. ನಮ್ಮ ಮಳಿಗೆ ಕೆಲಸಗಾರನಿಗೆ ತೋರಿಸಿಕೊಂಡು ಬರುತ್ತೇನೆ’ ಎಂಬುದಾಗಿ ಹೇಳಿದ್ದರು. ಅದನ್ನು ನಂಬಿದ್ದ ದೂರುದಾರ ಮಹಿಳೆ, ಸರ ಕೊಟ್ಟು ಕಳುಹಿಸಿದ್ದರು. ಆದರೆ, ಆರೋಪಿ ವಾಪಸು ಬಂದಿರಲಿಲ್ಲ. ನಂತರವೇ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಒಂಟಿ ಮಹಿಳೆಯರು ಇರುತ್ತಿದ್ದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ನಂದಿನಿ ಲೇಔಟ್, ವಿಜಯನಗರ, ಜಾಲಹಳ್ಳಿ ಹಾಗೂ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಚಿನ್ನಾಭರಣ ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.