ಬೆಂಗಳೂರು: ‘ಡೆಲ್’ ಕಂಪನಿಯ ಸಾಫ್ಟ್ವೇರ್ ಎಂಜಿನಿಯರ್ ಸತೀಶ್ ಎಂಬುವರನ್ನು ಅಪಹರಿಸಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನುಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಬನಶಂಕರಿ 2ನೇ ಹಂತದ ಸತೀಶ್, ಇದೇ 13ರಂದು ಸ್ನೇಹಿತನ ಜೊತೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡು ಇಬ್ಬರೂ ನಡೆದುಕೊಂಡು ಹೊರಟಿದ್ದರು. ಅದೇ ವೇಳೆ ಟೆಂಪೊದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಡ್ರಾಪ್ ನೀಡುವ ನೆಪದಲ್ಲಿ ಹತ್ತಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
’ನಿಗದಿತ ಸ್ಥಳ ಬರುತ್ತಿದ್ದಂತೆ ಚಾಲಕ, ಪ್ರಯಾಣ ದರ ಕೇಳಿದ್ದ. ಕೈಯಲ್ಲಿ ಹಣವಿಲ್ಲದಿದ್ದರಿಂದ ಎಟಿಎಂ ಘಟಕದಿಂದ ತೆಗೆಸಿಕೊಂಡು ಬರುವುದಾಗಿ ಹೇಳಿ ಸ್ನೇಹಿತ ಹೊರಟು ಹೋಗಿದ್ದ. ಸತೀಶ್ ಮಾತ್ರ ಸ್ಥಳದಲ್ಲೇ ನಿಂತಿದ್ದ. ಅದೇ ವೇಳೆ ಆರೋಪಿಗಳು, ಸತೀಶ್ ಅವರನ್ನು ಟೆಂಪೊದಲ್ಲಿ ಅಪಹರಿಸಿಕೊಂಡು ಹೋಗಿದ್ದರು. ಎಟಿಎಂ ಕಾರ್ಡ್ ಕಸಿದುಕೊಂಡು ₹4,400 ಡ್ರಾ ಮಾಡಿಕೊಂಡಿದ್ದರು.’
‘ಪತ್ನಿಗೂ ಕರೆ ಮಾಡಿಸಿ ಹಣಕ್ಕಾಗಿ ಒತ್ತಾಯಿಸಿದ್ದರು. ಹಣ ಸಿಗದಿದ್ದಾಗ ಮೊಬೈಲ್ ಹಾಗೂ ಕೈ ಗಡಿಯಾರ ಕಿತ್ತುಕೊಂಡು ಮಾರ್ಗಮಧ್ಯೆಯೇ ಸತೀಶ್ ಅವರನ್ನು ಬಿಟ್ಟು ಹೋಗಿದ್ದರು. ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.