ಕೆ.ಆರ್.ಪುರ: ಇಲ್ಲಿನ ರಾಮಮೂರ್ತಿನಗರದ ಎನ್ ಆರ್ ಐ ಬಡಾವಣೆಯಲ್ಲಿ ಶ್ರೀಕನಕ ಜನ ಜಾಗೃತಿ ಕುರುಬರ ಸಂಘದ ವತಿಯಿಂದ ಸಂತಕವಿ ದಾಸ ಶ್ರೇಷ್ಠ ಭಕ್ತ ಕನಕದಾಸರ 535ನೇ ಜಯಂತಿ ಪ್ರಯುಕ್ತ ಅದ್ದೂರಿಯಾಗಿ ಕನಕ ಜಾತ್ರಾ ಮಹೋತ್ಸವ ನಡೆಯಿತು.
108 ಕುಂಭ ಹೊತ್ತ ಮಹಿಳೆಯರು ಹಾಗೂ ಭವ್ಯ ಪಲ್ಲಕ್ಕಿ ರಥದ ಮೂಲಕ ಹೊರಟ ಭಕ್ತ ಕನಕದಾಸರ ಕಂಚಿನ ಮೂರ್ತಿಯ ಮೆರವಣಿಗೆ, ಡೊಳ್ಳು ಕುಣಿತ ಮತ್ತು ತಮಟೆ ವಾದ್ಯದೊಂದಿಗೆ ಕಲ್ಕೆರೆ ಗ್ರಾಮದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಿಂದ ಎನ್ ಆರ್ ಐ ಬಡಾವಣೆಯ ಬೃಹತ್ ವೇದಿಕೆಗೆ ತಲುಪಿತು.
ಕೋಲಾರ ತಾಲ್ಲೂಕು ವೇಮಗಲ್ ಚಂದ್ರಪ್ಪ ತಂಡದವರು ಭಕ್ತರ ಮೇಲೆ ತೆಂಗಿನಕಾಯಿ ಹೊಡೆಯುವ ಮಹಾ ಪವಾಡ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾಗಿನೆಲೆ ಮಹಾಸಂಸ್ಥಾನ ಹೊಸ ದುರ್ಗ ಶಾಖಾಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿಸ್ವಾಮಿ ಮಾತನಾಡಿ, ‘ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸುವಂತಾಗಬೇಕು’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕಲಬುರಗಿ ವಿಭಾಗೀಯ ತಿಂಥಿಣಿ ಮಹಾಸಂಸ್ಥಾನ ಮಠದ ಸಿದ್ದರಾಮಾನಂದ ಸ್ವಾಮೀಜಿ, ಸುಕ್ಷೇತ್ರ ಭೂಕೈಲಾಸ ಹುಲಜಂತಿ ಮಠದ ಮಾಳಿಂಗರಾಯ ಸ್ವಾಮೀಜಿ, ಮುಖಂಡರಾದ ಕಲ್ಕೆರೆ ಎಂ ರೇವಣ್ಣ, ಸಂಘದ ಅಧ್ಯಕ್ಷ ಕೃಷ್ಣಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.