ADVERTISEMENT

ಬೆಂಗಳೂರು | ‘ಪಾಲಿಕೆ ನೌಕರರ ಹಿತಾಸಕ್ತಿ ಕಾಪಾಡಿ’

ಜಿಬಿಎ ಹೊಸ ನಿಯಮಾವಳಿ ರೂಪಿಸುವ ಮುನ್ನ ಸಭೆ ಕರೆಯಲು ಸಂಘದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 15:49 IST
Last Updated 22 ಆಗಸ್ಟ್ 2025, 15:49 IST
<div class="paragraphs"><p>ಬಿಬಿಎಂಪಿ</p></div>

ಬಿಬಿಎಂಪಿ

   

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಆಡಳಿತಕ್ಕೆ ವೃಂದ ಬಲ, ಮುಂಬಡ್ತಿ, ನೇಮಕಾತಿಗೆ ವಿಧಾನಗಳನ್ನು ರೂಪಿಸುವ ಸಂದರ್ಭದಲ್ಲಿ ಪ್ರಸ್ತುತ ಬಿಬಿಎಂಪಿಯಲ್ಲಿರುವ ಅಧಿಕಾರಿ ಮತ್ತು ನೌಕರರ ಹಿತ ಕಾಪಾಡಬೇಕು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್‌ ಅವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ADVERTISEMENT

‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್‌ ಆರ್‌) ನಿಯಮಗಳನ್ನು ರಚಿಸುವವರೆಗೂ ಬಿಬಿಎಂಪಿಯ ಸಿ ಆ್ಯಂಡ್‌ ಆರ್‌ ನಿಯಮಗಳನ್ನೇ ಮುಂದುವರಿಸಬೇಕು. ಹೊಸ ನಿಯಮಾವಳಿ ರೂಪಿಸುವಾಗ, ಪಾಲಿಕೆಯ ನಿಯಮಗಳನ್ನು ಗಣನೆಗೆ ತೆಗೆದುಕೊಂಡು, ನೌಕರರ ಯಾವುದೇ ಸೌಲಭ್ಯಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

‘ಜಿಬಿಎಯಡಿ ಪಾಲಿಕೆಗಳನ್ನು ರಚಿಸಿ, ಎ ಮತ್ತು ಬಿ ದರ್ಜೆಯ ಕೆಲವು ಹುದ್ದೆಗಳಿಗೆ ನೇರ ನೇಮಕ ಮಾಡಿಕೊಂಡರೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಅಧಿಕಾರಿ– ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಾರೆ. ಒಟ್ಟು ಮಂಜೂರಾಗಿರುವ ಹಾಗೂ ಹೆಚ್ಚುವರಿಯಾಗಿ ಮಂಜೂರಾಗುವ ಉಪ ಆಯುಕ್ತರ ಹುದ್ದೆಗಳಲ್ಲಿ ಶೇಕಡ 60ರಷ್ಟನ್ನು ಪಾಲಿಕೆ ಅಧಿಕಾರಿಗಳಿಗೆ, ಶೇ 40ರಷ್ಟನ್ನು ಕೆಎಎಸ್‌– ಕೆಎಂಎಸ್‌ ವೃಂದದಿಂದ ಎರವಲು ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಮುಂದುವರಿಸಬೇಕು’ ಎಂದು ಕೋರಿದ್ದಾರೆ.

‘ಸಹಾಯಕ ಆಯುಕ್ತರ ಎಲ್ಲ ಹುದ್ದೆಗಳನ್ನು ಪಾಲಿಕೆಯ ಅಧಿಕಾರಿಗಳಿಗೆ ಸಂಪೂರ್ಣವಾಗಿ ಮೀಸಲಿಡಬೇಕು. ಕಂದಾಯದ ಹೆಚ್ಚುವರಿ ಆಯುಕ್ತರ ಹುದ್ದೆ ಸೃಷ್ಟಿಸಿ, ಪಾಲಿಕೆಯ ಜಂಟಿ ಆಯುಕ್ತರಿಗೆ ಮುಂಬಡ್ತಿ ನೀಡಲು ಅವಕಾಶ ಕಲ್ಪಿಸಬೇಕು. ಸಹಾಯಕ ಕಂದಾಯ ಅಧಿಕಾರಿ, ಪರಿವೀಕ್ಷರ ಹುದ್ದೆಗಳನ್ನು ಈಗಿರುವ ಸಿ ಆ್ಯಂಡ್‌ ಆರ್‌ ನಿಯಮಗಳಂತೆ ಮುಂಬಡ್ತಿ ಮೂಲಕ ಭರ್ತಿ ಮಾಡಬೇಕು. ಉಪ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ ಹಾಗೂ ಸಹಾಯಕ ಆಯುಕ್ತರ ಹುದ್ದೆಗಳು ಒಂದೇ ರೀತಿಯ ಜವಾಬ್ದಾರಿ ಹೊಂದಿದ್ದು, ಡಿಆರ್‌ಒ, ಎಸಿ, ಆರ್‌ಒ ಹುದ್ದೆಗಳನ್ನು ಒಂದೇ ವೃಂದಕ್ಕೆ ಒಟ್ಟುಗೂಡಿಸಿ, ಆರ್‌ಒ ಹುದ್ದೆಗಳನ್ನಾಗಿ ಪರಿವರ್ತಿಸಬೇಕು. ಸಹಾಯಕ ಕಂದಾಯ ಅಧಿಕಾರಿ ವೃಂದಕ್ಕೆ ಮುಂಬಡ್ತಿ ನೀಡಬೇಕು’ ಎಂದು ಅಮೃತ್‌ರಾಜ್‌ ಮನವಿ ಮಾಡಿದ್ದಾರೆ.

‘ಜಿಬಿಎಗೆ ಹೊಸದಾಗಿ ನಿಯಮಗಳನ್ನು ರೂಪಿಸುವ ಮುನ್ನ  ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೊಂದಿಗೆ ಸಭೆ ನಡೆಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.