ADVERTISEMENT

ಇಂದಿರಾನಗರ ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ ನವೀಕರಣಕ್ಕೆ ಭೂಮಿಪೂಜೆ: ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಮೇ 2025, 22:50 IST
Last Updated 8 ಮೇ 2025, 22:50 IST
ಇಂದಿರಾನಗರ ಬ್ಯಾಸ್ಕೆಟ್‌ ಬಾಲ್‌ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವಾಗ ಸ್ಥಳೀಯರು ತೆರಳದಂತೆ ‍ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು
ಇಂದಿರಾನಗರ ಬ್ಯಾಸ್ಕೆಟ್‌ ಬಾಲ್‌ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವಾಗ ಸ್ಥಳೀಯರು ತೆರಳದಂತೆ ‍ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು   

ಬೆಂಗಳೂರು: ಇಂದಿರಾನಗರ ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ ಅನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿತು. ಯೋಜನೆ ವಿರೋಧಿಸುತ್ತಿದ್ದ ತಮ್ಮನ್ನು ಕಾರ್ಯಕ್ರಮ ಸ್ಥಳಕ್ಕೆ ಬಾರದಂತೆ ತಡೆದು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಂದಿರಾನಗರದಲ್ಲಿರುವ ಬಿಬಿಎಂಪಿ ಆಟದ ಮೈದಾನದ ಒಂದು ಬದಿಯಲ್ಲಿ ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ ಇದೆ. ಇದನ್ನು ಒಳಾಂಗಣ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣವಾಗಿ ಮಾಡಬೇಕು ಎಂದು ಇಂದಿರಾನಗರ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಶನ್‌ ಒಂದು ದಶಕದಿಂದ ಪ್ರಯತ್ನಿಸುತ್ತಾ ಬಂದಿತ್ತು. 

‘ಇಂದಿರಾನಗರ ಸ್ಟೇಜ್‌–1, 2, ಲಕ್ಷ್ಮೀಪುರ, ಬಿನ್ನಮಂಗಲ ಸಹಿತ ಸುತ್ತಮುತ್ತಲ ನಿವಾಸಿಗಳಿಗೆ ಇದೊಂದೇ ಆಟದ ಮೈದಾನ ಇರುವುದು. ಇಲ್ಲಿ ಶೇ 30ರಷ್ಟು ಭಾಗವನ್ನು ಬ್ಯಾಸ್ಕೆಟ್‌ ಬಾಲ್‌  ಬಳಸಲಾಗುತ್ತಿದೆ. ಕ್ರೀಡಾಂಗಣದ ಉಳಿದ ಜಾಗವು ಬೇರೆ ಕ್ರೀಡೆಗಳಿಗೆ ಬಳಕೆಯಾಗುತ್ತಿದೆ. ಒಳಾಂಗಣ ಕ್ರೀಡಾಂಗಣ ನಿರ್ಮಿಸಿದರೆ ಆನಂತರ ಸ್ಥಳೀಯರ ಬಳಕೆಗೆ ಸಿಗುವುದಿಲ್ಲ’ ಎಂದು ಸ್ಥಳೀಯರು ವಿರೋಧಿಸುತ್ತಾ ಬಂದಿದ್ದರು. 

ADVERTISEMENT

ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ 2016ರಲ್ಲಿ ಸಭೆ ನಡೆದಿತ್ತು. ಸ್ಥಳೀಯರ ವಿರೋಧ ವ್ಯಕ್ತವಾಗಿರುವುದರಿಂದ ಈ ಕಡತವನ್ನು ಸರ್ಕಾರದ ಹಂತದಲ್ಲಿ ಮುಕ್ತಾಯಗೊಳಿಸಲಾಗಿದೆ ಎಂದು ಆಗ ನಗರಾಭಿವೃದ್ಧಿ ಇಲಾಖೆಯ ಅಧಿನ ಕಾರ್ಯದರ್ಶಿಯವರು ಬಿಬಿಎಂಪಿಗೆ ಪತ್ರ ಬರೆದಿದ್ದರು. 

‘ಇದೀಗ ಬ್ಯಾಸ್ಕೆಟ್‌ಬಾಲ್‌ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅಸೋಸಿಯೇಶನ್‌ ಮತ್ತೆ ಮುಂದಾಗಿದ್ದು, ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ನಾವು ಸುಮಾರು 60 ಮಂದಿ ಸ್ಥಳೀಯರು ಅಲ್ಲಿಗೆ ತೆರಳಲು ಪ್ರಯತ್ನಿಸಿದರೂ ಪೊಲೀಸರು ಬಿಟ್ಟಿಲ್ಲ. ದಲಿತ ಸಂಘರ್ಷ ಸಮಿತಿಯವರೂ ಅಲ್ಲಿಗೆ ಹೋಗಲು ಮುಂದಾದಾಗಲೂ ತಡೆದಿದ್ದಾರೆ’ ಎಂದು ‘ಐ ಚೇಂಜ್‌ ಇಂದಿರಾನಗರ’ ಸಂಸ್ಥಾಪಕಿ ಸ್ನೇಹಾ ನಂದಿಹಾಳ್‌ ಆರೋಪಿಸಿದ್ದಾರೆ.

‘ಒಳಾಂಗಣ ಕ್ರೀಡಾಂಗಣ ನಿರ್ಮಾಣವಾದರೆ ಅದು ಸ್ಥಳೀಯರ ಬಳಕೆಗೆ ಸಿಗುವುದಿಲ್ಲ. ಅಲ್ಲದೇ ವಿಸೃತ ಯೋಜನಾ ವರದಿಯಲ್ಲಿ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣ ನಿರ್ಮಾಣದ ಜಾಗವನ್ನು ಗುರುತಿಸಿದ್ದು, ಕ್ರೀಡಾಂಗಣದ ಉಳಿದ ಜಾಗವನ್ನು ಪಾರ್ಕಿಂಗ್‌ ಜಾಗ ಎಂದು ತೋರಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಕ್ರೀಡಾಂಗಣವೇ ಇಲ್ಲದಂತಾಗಲಿದೆ’ ಎಂದು ಅವರು ತಿಳಿಸಿದರು.

ಸ್ಥಳೀಯರಿಗೆ ತೊಂದರೆ ಇಲ್ಲ:

‘ಇಂದಿರಾನಗರ ಬಿಬಿಎಂಪಿ ಮೈದಾನದಲ್ಲಿ ಈಗಾಗಲೇ ಬ್ಯಾಸ್ಕೆಟ್‌ ಬಾಲ್‌ ಕ್ರೀಡಾಂಗಣ ಇದೆ. ಅದಕ್ಕೆ ಆಟಗಾರರಿಗೆ ಬಟ್ಟೆ ಬದಲಾಯಿಸುವ ಕೊಠಡಿಗಳು ಮತ್ತು ಚಾವಣಿಯಂತಹ ಕೆಲವು ಸೌಲಭ್ಯ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಸ್ಥಳೀಯರಿಗೆ ಈ ಮೈದಾನ ಮುಂದೆಯೂ ದೊರೆಯಲಿದೆ. ಯಾರಿಗೂ ಪ್ರವೇಶ ನಿರಾಕರಣೆ ಇರುವುದಿಲ್ಲ. ಸ್ಥಳೀಯರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ಬಿಬಿಎಂಪಿ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಆರ್. ಪ್ರತಿಕ್ರಿಯಿಸಿದ್ದಾರೆ.

‘ಮಾಹಿತಿ ಕೊರತೆಯಿಂದ ವಿರೋಧ’

‘₹ 4.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದ ನವೀಕರಣ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಬ್ಯಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌ ಕೋರಿಕೆಯನ್ನು ಮಾತ್ರ ಸಲ್ಲಿಸಿತ್ತು. ಕ್ರೀಡಾಂಗಣಕ್ಕೆ ಯಾರನ್ನೂ ನಿರ್ಬಂಧಿಸುವುದಿಲ್ಲ. ಸ್ಥಳೀಯ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿ ನೀಡುವುದಕ್ಕಾಗಿಯೇ ಯೋಜನೆ ರೂಪಿಸಲಾಗಿದೆ. ಮಾಹಿತಿ ಕೊರತೆಯಿಂದ ಕೆಲವರು ಸ್ಥಳೀಯರ ಹೆಸರಿನಲ್ಲಿ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಇಂದಿರಾನಗರ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.