ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್ನ ಠೇವಣಿದಾರರ ಹಣ ದುರ್ಬಳಕೆ ಹಾಗೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ.
ಶ್ರೀನಿವಾಸ್, ರಾಮಕೃಷ್ಣ, ಟಿ. ಕುಮರೇಶ್ ಬಾಬು, ಶ್ರೀಹರಿಕೃಷ್ಣ, ಎಸ್.ಪಿ. ಶ್ರೀಶಾ, ರಮೇಶ್, ಎನ್. ಲೋಕೇಶ್, ಜಿ. ಪ್ರಸನ್ನ ಕುಮಾರ್, ಎನ್. ವಿಜಯಸಿಂಹ ಹಾಗೂ ಬಿ.ಎನ್.ವೆಂಕಟೇಶ್ ಬಂಧಿತರು ಎಂದು ಗೊತ್ತಾಗಿದೆ. ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ.
ರಾಜ್ಯ ಸರ್ಕಾರದ ಆದೇಶದಂತೆ ತನಿಖೆ ಆರಂಭಿಸಿರುವ ಸಿಐಡಿಯ ಆರ್ಥಿಕ ವಿಭಾಗದ ಅಧಿಕಾರಿಗಳು, ಬ್ಯಾಂಕ್ಗೆ ಸಂಬಂಧಪಟ್ಟ ಸ್ಥಳಗಳು ಹಾಗೂ ಆರೋಪಿಗಳ ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದರು. ಇದೇ ವೇಳೆ ಆರೋಪಿಗಳನ್ನು ಬಂಧಿಸಿದರು.
‘ಬಂಧಿತ 11 ಆರೋಪಿಗಳನ್ನು 3ನೇ ಎಸಿಎಂಎಂ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರ ಅನುಮತಿಯಂತೆ 10 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ. ಒಬ್ಬ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.
‘ಹಲಸೂರು, ರಾಜಾಜಿನಗರ, ಸದಾಶಿವನಗರ, ಜಯನಗರ ಸೇರಿದಂತೆ ಹದಿನೈದು ಸ್ಥಳಗಳಲ್ಲಿ ದಾಳಿ ನಡೆಯಿತು. ಸಾಲ ಪಡೆದವರು, ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆ ಮತ್ತು ಕಚೇರಿಗಳಲ್ಲಿ ತಪಾಸಣೆ ನಡೆಸಲಾಯಿತು. ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ವಿವರಿಸಿದರು.
ಮರಣ ಪತ್ರದಲ್ಲಿ ಹೆಸರು:ಬ್ಯಾಂಕ್ ಸಿಇಒ ಆಗಿದ್ದ ವಾಸುದೇವ ಮಯ್ಯ ಅವರು ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮರಣಪತ್ರದಲ್ಲಿ ಹೆಸರಿದ್ದ ಕೆಲ ಆರೋಪಿಗಳನ್ನೂ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.