
ಜಿಕೆವಿಕೆ
ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೆಂದ್ರದ (ಜಿಕೆವಿಕೆ) ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಹೂವಿನ ಹರಾಜು ಮಾರುಕಟ್ಟೆ ಸ್ಥಾಪಿಸುವ ಪ್ರಸ್ತಾವಕ್ಕೆ ಪರಿಸರವಾದಿಗಳು, ವಿದ್ಯಾರ್ಥಿಗಳು, ರೈತರು ಹಾಗೂ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಅಧ್ಯಕ್ಷ ವಿಜಯ್ ನಿಶಾಂತ್, ‘ವಿಶ್ವವಿದ್ಯಾಲಯದ ಸಂಶೋಧನಾ ಪ್ರದೇಶದ ಸುಮಾರು ಐದು ಎಕರೆ ಹಸಿರು ಹೊದಿಕೆಯನ್ನು ತೆರವುಗೊಳಿಸುವ ಈ ಯೋಜನೆಯಡಿ, 900ಕ್ಕೂ ಅಧಿಕ ಮರಗಳನ್ನು ಕಡಿಯುವ ಸಾಧ್ಯತೆಯಿದೆ. ಈ ಕ್ರಮವು ತೋಟಗಾರಿಕಾ ಜೀವವೈವಿಧ್ಯತೆಯನ್ನು ನಾಶಮಾಡಲಿದೆ. ಜಿಕೆವಿಕೆ ಕ್ಯಾಂಪಸ್ನಲ್ಲಿ ವಾಣಿಜ್ಯ ಹೂವಿನ ಮಾರುಕಟ್ಟೆ ಸ್ಥಾಪಿಸುವುದು ಬೆಂಗಳೂರಿನ ಸುಸ್ಥಿರ ನಗರಾಭಿವೃದ್ಧಿಯ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ’ ಎಂದು ಹೇಳಿದರು.
‘ಈ ಪ್ರದೇಶದಲ್ಲಿ ಗೋಡಂಬಿ, ಮಾವು, ಹಲಸು ಸೇರಿ ವಿವಿಧ ಜಾತಿಯ ಮರಗಳಿವೆ. ಅವುಗಳನ್ನು ಕಡಿಯುವುದರಿಂದ ದಶಕಗಳ ಸಂಶೋಧನಾ ದತ್ತಾಂಶ ನಾಶವಾಗುತ್ತದೆ. 2009ರಲ್ಲಿ ಜಿಕೆವಿಕೆಯನ್ನು ಅಧಿಕೃತವಾಗಿ ಜೈವಿಕ ಪಾರಂಪರಿಕ ತಾಣವೆಂದು ಘೋಷಿಸಲಾಗಿದೆ. ನೂರಾರು ಸ್ಥಳೀಯ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳಿಗೆ ನೆಲೆಯಾಗಿದೆ. ಇಲ್ಲಿ ಮಾರುಕಟ್ಟೆ ಸ್ಥಾಪಿಸಿದರೆ ಬೃಹತ್ ಪರಿಸರ ಮತ್ತು ಜೀವವೈವಿಧ್ಯ ನಷ್ಟವಾಗುತ್ತದೆ’ ಎಂದರು.
‘ಮಾರುಕಟ್ಟೆ ಸ್ಥಾಪಿಸಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವಯವ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದು ಕ್ಯಾಂಪಸ್ ಮತ್ತು ಹತ್ತಿರದ ವಸತಿ ಪ್ರದೇಶಗಳಲ್ಲಿ ವಾಸನೆ, ಕೀಟಬಾಧೆ ಮತ್ತು ನೈರ್ಮಲ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಪರ್ಯಾಯ ಸ್ಥಳದಲ್ಲಿ ಈ ಮಾರುಕಟ್ಟೆ ಸ್ಥಾಪಿಸಿ, ಪರಿಸರ ಹಾನಿಯನ್ನು ತಪ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಬೆಂಗಳೂರು ಈಗಾಗಲೇ ತನ್ನ ಹಸಿರು ಹೊದಿಕೆಯನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಲಾಲ್ಬಾಗ್, ಕಬ್ಬನ್ ಉದ್ಯಾನ ಮತ್ತು ಜಿಕೆವಿಕೆಯನ್ನು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಉಳಿಸಿಕೊಳ್ಳಬೇಕು’ ಎಂದು ಹೇಳಿದರು.
ಪರಿಸರವಾದಿಗಳು, ವಿದ್ಯಾರ್ಥಿಗಳು, ರೈತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.