ಮೀಸಲಾತಿ(ಸಾಂಕೇತಿಕ ಚಿತ್ರ)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.19ರಂದು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನದಾಸ್ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸಬೇಕು ಎಂದು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ನ ಆದೇಶದಂತೆ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅತಿ ಹೆಚ್ಚು ಹಿಂದುಳಿದ ಸಣ್ಣ ಜಾತಿಗಳನ್ನು ‘ಎ’ ಗುಂಪು ಮಾಡಿ ಶೇ 1 ಮೀಸಲಾತಿ ನಿಗದಿಪಡಿಸಲಾಗಿದೆ. ಮಾದಿಗ ಮತ್ತು ಅದೇ ರೀತಿ ಅಸ್ಪೃಶ್ಯತೆ ಹೊಂದಿರುವ ಜಾತಿಗಳನ್ನು ‘ಬಿ’ ಗುಂಪಿಗೆ ಸೇರಿಸಿ ಶೇ 6, ಹೊಲೆಯ ಮತ್ತು ಅದೇ ರೀತಿ ಅಸ್ಪೃಶ್ಯತೆ ಹೊಂದಿರುವ ಜಾತಿಗಳನ್ನು ‘ಸಿ’ ಗುಂಪು ಮಾಡಿ ಶೇ 5, ಅಸ್ಪೃಶ್ಯರಲ್ಲದ ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳನ್ನು ‘ಡಿ’ ಗುಂಪಿಗೆ ಸೇರಿಸಿ ಶೇ 4, ಮಾದಿಗ, ಛಲವಾದಿ ಎಂದು ಗುರುತಿಸಿಕೊಳ್ಳದೆ ಆದಿಕರ್ನಾಟಕ, ಆದಿಆಂಧ್ರ, ಆದಿದ್ರಾವಿಡ ಎಂದು ಗುರುತಿಸಿಕೊಂಡಿರುವವರನ್ನು ‘ಇ’ ಗುಂಪು ಮಾಡಿ ಶೇ 1 ಮೀಸಲಾತಿ ಹಂಚಿಕೆ ಮಾಡಲಾಗಿದೆ. ‘ಇ’ ಗುಂಪಿನಲ್ಲಿ ಹೊಲೆಯ-ಮಾದಿಗರು ಇದ್ದಾರೆ. ಇದು ಹಿಂದುಳಿದಿರುವಿಕೆಯ ಆಧಾರದಲ್ಲಿ ಮಾಡಲಾಗಿದೆ. ಇದು ವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದಾರೆ.
‘ಛಲವಾದಿ ಸಮುದಾಯದವರು ಗೊಂದಲ ಮೂಡಿಸಬಾರದು. ಒಂದೇ ಕುಟುಂಬದ ಅಣ್ಣ ತಮ್ಮಂದಿರಾದ ನಾವು ಒಳಮೀಸಲಾತಿ ವರದಿಗೆ ಸಂಬಂಧಿಸಿದಂತೆ ಪ್ರಬುದ್ಧರಾಗಿ ವರ್ತಿಸುವ ಮೂಲಕ ವರದಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಇದ್ದರೆ ನಮ್ಮ ಸಣ್ಣ ಮನಸ್ತಾಪದಿಂದ ದಲಿತ ಶಕ್ತಿಗೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.