ಬೆಂಗಳೂರು: ಲಾಕ್ಡೌನ್ ಸಡಿಲಗೊಂಡು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿದ್ದರೂ, ಹೇರ್ಕಟಿಂಗ್ ಶಾಪ್, ಸಲೂನ್ ಹಾಗೂ ಸ್ಪಾಗಳ ಸ್ಥಿತಿ ಸುಧಾರಿಸಿಲ್ಲ. ಗ್ರಾಹಕರು ಕ್ಷೌರದ ಅಂಗಡಿಗಳಿಗೆ ಹೋಗಲು ಈಗಲೂ ಹಿಂಜರಿಯುತ್ತಿದ್ದಾರೆ. ಕೆಲಸ ಪ್ರಾರಂಭಿಸಿ ನಾಲ್ಕು ದಿನಗಳಾದರೂ ಶೇ 50ರಷ್ಟೂ ದುಡಿಮೆ ಆಗುತ್ತಿಲ್ಲ ಎಂದು ಕ್ಷೌರಿಕರು ಹೇಳುತ್ತಾರೆ.
‘ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಮಳಿಗೆ ತೆಗೆದಿದ್ದರೂ ಗ್ರಾಹಕರು ಬರುತ್ತಿಲ್ಲ. ಲಾಕ್ಡೌನ್ಗಿಂತಲೂ ಮೊದಲು ದಿನಕ್ಕೆ 30ರಿಂದ 35 ಗ್ರಾಹಕರು ಬರುತ್ತಿದ್ದರು. ಈಗ ಹತ್ತು ಜನರೂ ಬರುತ್ತಿಲ್ಲ’ ಎಂದು ಆರ್.ಟಿ. ನಗರದ ಸಲೂನ್ ಒಂದರ ಮಾಲೀಕ ಸಲೀಂ ಹೇಳಿದರು.
‘ಮೊದಲು ಹೇರ್ ಕಟ್ ಜೊತೆಗೆ ಶೇವಿಂಗ್, ಫೇಷಿಯಲ್, ಹೇರ್ ಕಲರ್, ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಈಗ, ಹೇರ್ ಕಟಿಂಗ್ ಮಾತ್ರ ಮಾಡಿಸಿಕೊಳ್ಳುತ್ತಾರೆ. ಕಟಿಂಗ್ಗೆ ₹70 ಇದ್ದರೆ, ಕೂದಲಿಗೆ ಬಣ್ಣ ಹಚ್ಚಲು, ಫೇಷಿಯಲ್, ಮಸಾಜ್ ಎಲ್ಲ ಸೇರಿ ₹300ರಿಂದ ₹400 ಆಗುತ್ತಿತ್ತು. ಗ್ರಾಹಕರು ಕಡಿಮೆ ಇದ್ದರೂ ಈ ಎಲ್ಲ ಸೇವೆಪಡೆದುಕೊಂಡಿದ್ದರೆ ಅನುಕೂಲವಾಗುತ್ತಿತ್ತು’ ಎಂದರು.
‘ರಾಜ್ಯದಲ್ಲಿ ಸುಮಾರು 3.5 ಲಕ್ಷ ಜನ ಕ್ಷೌರಿಕರಿದ್ದಾರೆ. ಈ ಪೈಕಿ, ಒಂದು ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನಲ್ಲಿ ಇದ್ದಾರೆ.ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಲ್ಲಿ ಬಹುತೇಕರು ಬಡವರು. ಗ್ರಾಹಕರಿಲ್ಲದೆ ಈಗ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ' ಎಂದು ರಾಜ್ಯ ಸವಿತಾ ಸಮಾಜ ಸಂಘದ ಸಂಚಾಲಕ ಎಂ.ಎಸ್. ಮುತ್ತುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಬಾಡಿಗೆ ಸಮಸ್ಯೆ:
‘₹50ಲಕ್ಷದಿಂದ ₹60 ಲಕ್ಷದವರೆಗೆ ಬಂಡವಾಳ ಹೂಡಿ ಸ್ಪಾಗಳನ್ನು ಪ್ರಾರಂಭಿಸಿದ್ದೇವೆ. ತಿಂಗಳ ಬಾಡಿಗೆಯೇ ₹70 ಸಾವಿರದಿಂದ ₹80ಸಾವಿರದವರೆಗೆ ಆಗುತ್ತದೆ. ಬೇರೆ ರಾಜ್ಯಗಳ ಕೆಲಸಗಾರರು ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ಈಗ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವುದರಿಂದ ನಷ್ಟ ಅನುಭವಿಸುತ್ತಿದ್ದೇವೆ. ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ’ ಎಂದು ಸ್ಪಾದ ಮಾಲೀಕರೊಬ್ಬರು ಹೇಳಿದರು.
‘ಸೋಂಕು ಹರಡುವ ಭೀತಿಯಿಂದ ಕೆಲವರು ಮಸಾಜ್ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಕಟಿಂಗ್ ಮಾಡುವಾಗ ಬಳಸಿ ಬಿಸಾಡುವಂತಹ ಬಟ್ಟೆಗಳನ್ನು ಹಾಕುತ್ತೇವೆ. ಇದಕ್ಕೆ ₹100 ಹೆಚ್ಚು ಕೊಡಬೇಕಾಗುತ್ತದೆ. ಕೆಲವು ಗ್ರಾಹಕರು ಇದಕ್ಕೆ ಒಪ್ಪಿದರೆ, ಕೆಲವರು ಹೆಚ್ಚು ಹಣ ಕೊಡಲು ಒಪ್ಪುವುದಿಲ್ಲ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.