ADVERTISEMENT

ಬಿಎಂಟಿಸಿ ಬಸ್‌ಗಳಲ್ಲೇ ಅರ್ಧ ಕೆ.ಜಿ ಚಿನ್ನ ಕದ್ದರು!

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:22 IST
Last Updated 14 ಮೇ 2019, 20:22 IST

ಬೆಂಗಳೂರು: ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ಹಾಗೂ ಚಿನ್ನಾಭರಣ ದೋಚುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು, ಅರ್ಧ ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

ಹನುಮಂತನಗರದ ಚಾಂದ್ ಪಾಷಾ (32) ಹಾಗೂ ಸೈಯದ್ ಅಕ್ರಂ (40) ಬಂಧಿತರು. ಇಬ್ಬರೂ ಭದ್ರಾವತಿ ತಾಲ್ಲೂಕಿನವರಾಗಿದ್ದು, ಕಳ್ಳತನ ಮಾಡುವುದಕ್ಕಾಗಿಯೇ ನಗರಕ್ಕೆ ಬಂದು ನೆಲೆಸಿದ್ದರು. ಇವರ ಬಂಧನದಿಂದ ಒಂಬತ್ತು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ ಹಾಗೂ ಸಂಜೆ ವೇಳೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಇವರು, ಹೆಚ್ಚು ಪ್ರಯಾಣಿಕರಿರುವ ಬಸ್‌ಗಳನ್ನೇ ಹತ್ತುತ್ತಿದ್ದರು. ಚಿನ್ನದ ಸರ ತೊಟ್ಟಿರುವ ಮಹಿಳೆಯ ಹಿಂದೆಯೇ ನಿಂತುಕೊಂಡು, ಅವರ ಗಮನಕ್ಕೆ ಬಾರದಂತೆ ಸರ ಎಗರಿಸುತ್ತಿದ್ದರು. ನಂತರ ಮುಂದಿನ ನಿಲ್ದಾಣದಲ್ಲೇ ಇಳಿದು ಹೋಗುತ್ತಿದ್ದರು.

ADVERTISEMENT

ಆಭರಣ ಕಳೆದುಕೊಂಡವರು, ಉಪ್ಪಾರಪೇಟೆ ಠಾಣೆಯ ಮೆಟ್ಟಿಲೇರಿದ್ದರು. ಮೆಜೆಸ್ಟಿಕ್ ನಿಲ್ದಾಣದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರಿಗೆ, ಹಳೇ ಆರೋಪಿಗಳಾದ ಪಾಷಾ ಹಾಗೂ ಅಕ್ರಂನ ಚಹರೆ ಸಿಕ್ಕಿತ್ತು. ಹನುಮಂತನಗರದ ಮನೆಯಲ್ಲೇ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ.

ಬಸ್‌ಗಳಲ್ಲಿ ಜೇಬುಗಳ್ಳರ ಫೋಟೊ

‘ಬಿಎಂಟಿಸಿ ಬಸ್‌ಗಳಲ್ಲಿ ಪಿಕ್‌ ಪಾಕೆಟ್ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರಯಾಣಿಕರೂ ಎಚ್ಚರಿಕೆಯಿಂದ ಇರಬೇಕು. ಎಲ್ಲ ಬಸ್‌ಗಳಲ್ಲೂ ಜೇಬುಗಳ್ಳರ ಫೋಟೊಗಳನ್ನು ಅಂಟಿಸುವ ಬಗ್ಗೆ ಬಿಎಂಟಿಸಿ ಅಧಿಕಾರಿಗಳ ಜತೆ ಈಗಾಗಲೇ ಚರ್ಚಿಸಿದ್ದೇನೆ. ಪ್ರಯಾಣಿಕರು ಇನ್ನು ಮುಂದಾದರೂ ಆ ಫೋಟೊಗಳನ್ನು ನೋಡಿಕೊಂಡು, ತಮ್ಮ ಅಕ್ಕ–ಪಕ್ಕ ನಿಂತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.