
ಸಮಾರಂಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಅನ್ನಪೂರ್ಣ ಕೆ., ಲಕ್ಷ್ಮಿ ಎಂ. ಮತ್ತು ಕಾಂತರಾಜು ಎಚ್. ಅವರನ್ನು ಗೌರವಿಸಲಾಯಿತು. ಕೆ.ಎಂ. ನಾಗರಾಜ್, ಮಮತಾ ದೇವರಾಜ್, ಕರ್ನಾಟಕ ಹಳ್ಳಿಕಾರ ಜನಾಂಗದ ಅಧ್ಯಕ್ಷ ಮುನಿರಂಗಪ್ಪ, ನಸೀರ್ ಅಹಮದ್ ಮತ್ತು ಎಚ್.ಎಂ. ರೇವಣ್ಣ ಉಪಸ್ಥಿತರಿದ್ದರು
-ಪ್ರಜಾವಾಣಿ ಚಿತ್ರ
ಬೆಂಗಳೂರು: ಆರ್.ಎಂ.ಆರ್. ಹಳ್ಳಿಕಾರ ಫೌಂಡೇಷನ್ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಳ್ಳಿಕಾರ ಸಮುದಾಯದ 91 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
2023–24 ಹಾಗೂ 2024–25 ಸಾಲಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಹಳ್ಳಿಕಾರ ಸಮುದಾಯದ ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತಲಾ ₹ 10 ಸಾವಿರ ನಗದು, ಪಿಎಚ್.ಡಿ ಅಭ್ಯರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ತಲಾ ₹ 15 ಸಾವಿರ ನಗದು ನೀಡಿ ಪ್ರೋತ್ಸಾಹಿಸಲಾಯಿತು.
ಸಮಾರಂಭ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹಳ್ಳಿಕಾರ ಸಮುದಾಯದವರಿದ್ದಾರೆ. ಅವರು ವ್ಯವಸಾಯವನ್ನು ನಂಬಿದ್ದು, ಹಿಂದುಳಿದ ವರ್ಗಕ್ಕೆ ಸೇರಿಸಲು ಟ್ರಸ್ಟ್ನ ಅಧ್ಯಕ್ಷರಾದ ನಾಗರಾಜ್ ಮತ್ತು ಸಮುದಾಯದ ಮುಖಂಡರು ಪ್ರಯತ್ನ ಮಾಡುತ್ತಿದ್ದಾರೆ. ಸಮುದಾಯದ ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ, ಸಮುದಾಯಕ್ಕೆ ಕೊಡುಗೆ ನೀಡಬೇಕು. ತಾವು ಬೆಳೆದುಬಂದ ಹಾದಿಯನ್ನು ಮರೆಯಬಾರದು’ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ‘ಯಾವುದೇ ಸಮುದಾಯ ಮುಂದೆ ಬರಬೇಕಾದರೆ ರಾಜಕೀಯ ಪ್ರಾತಿನಿಧ್ಯ ಕೂಡ ಮುಖ್ಯವಾಗುತ್ತದೆ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿ, ಗೆಲ್ಲುವುದು ಕಷ್ಟಸಾಧ್ಯ. ಗೆದ್ದರೂ ಐದು ವರ್ಷಗಳಿಗೊಮ್ಮೆ ಮತ ಭಿಕ್ಷೆಗೆ ಜನರ ಮುಂದೆ ಹೋಗಬೇಕಾಗುತ್ತದೆ. ಆದ್ದರಿಂದ ಸಮುದಾಯದ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗುವ ಕಡೆಗೆ ಗಮನ ಹರಿಸಬೇಕು’ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್, ‘ಸಮುದಾಯದ ವಿದ್ಯಾರ್ಥಿಗಳು ಜ್ಞಾನಾರ್ಜನೆಯಲ್ಲಿ ಉತ್ತಮ ಸಾಮರ್ಥ್ಯ ಹೊಂದಿದ್ದರೂ ಅಗತ್ಯ ಮಾರ್ಗದರ್ಶನ, ಪ್ರೊತ್ಸಾಹ ಮತ್ತು ಉತ್ತೇಜನ ದೊರೆಯದೆ ಮಂದಗತಿಯಲ್ಲಿ ಸಾಗುತ್ತಿದ್ದಾರೆ. ಪಾಲಕರಾದ ಮುನಿರಂಗಪ್ಪ ಮತ್ತು ರಂಗಮ್ಮ ಅವರ ಸ್ಮರಣಾರ್ಥ 2022ರಲ್ಲಿ ಸ್ಥಾಪಿಸಲಾದ ಈ ಟ್ರಸ್ಟ್ ಮೂಲಕ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಒದಗಿಸಲಾಗುತ್ತಿದೆ’ ಎಂದರು.
ಇಂಧನ ಸಚಿವ ಕೆ.ಜೆ. ಜಾರ್ಜ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.