ಬೆಂಗಳೂರು: ‘ನಮ್ಮ ಕನ್ನಡ ಸಾರಸ್ವತ ಭೂಮಿಯು ಬಂಜೆಯಲ್ಲ. ಅದು ಕಣ್ಣು ಹಾಯಿಸಿದಷ್ಟೂ ಸಂಶೋಧನೆಯ ಸಾಧ್ಯತೆಗಳತ್ತ ದಾರಿ ತೋರುವ ಕನ್ನೆ ನೆಲವಾಗಿದೆ’ ಎಂದು ಸಂಶೋಧಕ ಪ್ರೊ. ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.
ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಸಂಶೋಧನೆಯ ಹೊಸ ಸಾಧ್ಯತೆಗಳು’ ಕುರಿತ ರಾಷ್ಟ್ರಮಟ್ಟದ ‘ಸಂಶೋಧನಾ ಕಾರ್ಯಾಗಾರ’ವನ್ನು ವರ್ಚ್ಯುಯಲ್ ಆಗಿ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಇಂದು ದೊಡ್ಡ ವಿದ್ವಾಂಸರ ಬರಗಾಲ ಬಂದಿದೆ ಎಂದುಕೊಳ್ಳಬಾರದು. ಇಂದಿನ ಯುವ ಸಮುದಾಯವು ಸೃಜನಶೀಲ ಕ್ಷೇತ್ರದಲ್ಲಿ ಮಾಡುವಷ್ಟು ಕೆಲಸವನ್ನು ಸಂಶೋಧನಾ ಕ್ಷೇತ್ರದಲ್ಲೂ ಮಾಡಲು ಸಾಧ್ಯವಿದೆ. ಈಗಿನ ಹೊಸ ತಲೆಮಾರಿನ ಸಂಶೋಧಕರೇ ದೊಡ್ಡ ವಿದ್ವಾಂಸರಾಗಿ ರೂಪುಗೊಳ್ಳಬೇಕು’ ಎಂದು ಹೇಳಿದರು.
ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಜೋಶಿ ಮ್ಯಾಥ್ಯೂ ಮಾತನಾಡಿ, ‘ಸಂಶೋಧನೆ ಎಂಬುದು ನಿರಂತರ ಹುಡುಕಾಟದ ಮೂಲಕ ಮೂಡುವ ಲೋಕದ ಬೆಳಗು’ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎನ್.ಕೆ.ಲೋಲಾಕ್ಷಿ, ಮಾನವಿಕ ವಿಭಾಗದ ಡೀನ್ ಎ.ವಿ. ಗೋಪಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಸರ್ವೇಶ್ ಬಿ.ಎಸ್, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್, ಎಂ.ಭೈರಪ್ಪ, ಸೈಯದ್ ಮುಯಿನ್, ರವಿಶಂಕರ್ ಎ.ಕೆ, ಪ್ರೇಮಕುಮಾರ್ ಕೆ., ಕಿರಣಕುಮಾರ್ ಎಚ್.ಜಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.