ಬೆಂಗಳೂರು: ಹೆಬ್ಬಾಳದಲ್ಲಿ ಬಹು ಮಾದರಿ ಸಾರಿಗೆ ‘ಹಬ್’ ನಿರ್ಮಿಸಲು ಬಿಎಂಆರ್ಸಿಎಲ್ಗೆ ಕೆಐಎಡಿಬಿಯ 45 ಎಕರೆ ಜಮೀನನ್ನು ಶೀಘ್ರ ಹಸ್ತಾಂತರಿಸಲು ಶುಕ್ರವಾರ ನಡೆಯುವ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶಾಸಕ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಹೆಬ್ಬಾಳದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನದಲ್ಲಿರುವ ಜಮೀನನ್ನು ನೀಡುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಜಮೀನಿನ ದರವನ್ನು ಭರಿಸಲು ಬಿಎಂಆರ್ಸಿಎಲ್ ಸಿದ್ಧವಿದೆ. ಆದರೆ ಜಮೀನು ವರ್ಗಾಯಿಸಲು ನಗರಾಭಿವೃದ್ಧಿ ಮತ್ತು ಕೈಗಾರಿಕಾ ಇಲಾಖೆಗಳು ವಿಳಂಬ ಮಾಡುತ್ತಿವೆ ಎಂದು ದೂರಿದ್ದಾರೆ.
ಜಮೀನು ಒದಗಿಸಿಕೊಟ್ಟರೆ ಬಹು ಹಂತದ ಕಾರು ಪಾರ್ಕಿಂಗ್, ಆಧುನಿಕ ಡಿಪೊ ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳು ಇಲ್ಲಿ ನಿರ್ಮಾಣಗೊಳ್ಳಲಿವೆ. ಮೆಟ್ರೊ ನೀಲಿ, ಕಿತ್ತಳೆ, ಕೆಂಪು ಮಾರ್ಗಗಳು ಇಲ್ಲಿ ಸಂಪರ್ಕಿಸುತ್ತವೆ. ಭೂಸ್ವಾಧೀನ ವಿಳಂಬವಾದರೆ ಸಮಯ ಮತ್ತು ವೆಚ್ಚ ಮಿತಿ ಮೀರಲಿದೆ ಎಂದಿದ್ದಾರೆ.
ರಿಯಲ್ ಎಸ್ಟೇಟ್ ಲಾಬಿಗೆ ಮಣಿಯದೇ ಜಮೀನು ಹಸ್ತಾಂತರಕ್ಕೆ ನಿರ್ಧಾರ ಕೈಗೊಳ್ಳಬೇಕು. ಜಮೀನು ಬಿಟ್ಟುಕೊಟ್ಟಿರುವವರಿಗೆ ಕೂಡಲೇ ಪರಿಹಾರ ನಿಗದಿಪಡಿಸಿ, ನೀಡಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.