ADVERTISEMENT

21ರೊಳಗೆ ಮದುವೆಯಾಗಿ, 3ಕ್ಕೂ ಹೆಚ್ಚು ಮಕ್ಕಳ ಹೊಂದಿ: ಗಂಗಾಧರೇಂದ್ರ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 15:30 IST
Last Updated 29 ಡಿಸೆಂಬರ್ 2024, 15:30 IST
ಸಮ್ಮೇಳನದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. (ಎಡದಿಂದ) ಡಾ. ಗಿರಿಧರ ಕಜೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಚಂದ್ರೇಶಾನಂದಜೀ ಮಹಾರಾಜ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಸಮ್ಮೇಳನದಲ್ಲಿ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾತನಾಡಿದರು. (ಎಡದಿಂದ) ಡಾ. ಗಿರಿಧರ ಕಜೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಚಂದ್ರೇಶಾನಂದಜೀ ಮಹಾರಾಜ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹವ್ಯಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಸಮುದಾಯದ ಯುವಕ–ಯುವತಿಯರಿಗೆ 18–21 ವರ್ಷಕ್ಕೆ ವಿವಾಹ ಮಾಡಿಸಬೇಕು. ಹವ್ಯಕ ಸಂತತಿ ವೃದ್ಧಿಗೆ ಕನಿಷ್ಠ ಮೂರು ಮಕ್ಕಳನ್ನಾದರೂ ಪಡೆಯಬೇಕು. ಮೂರಕ್ಕಿಂತ ಹೆಚ್ಚು ಮಕ್ಕಳಿದ್ದರೆ ನಮ್ಮ ಮಠಕ್ಕೆ ನೀಡಬಹುದು’ ಎಂದು ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಅಖಿಲ ಹವ್ಯಕ ಮಹಾಸಭಾ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ನಡೆದ ಸಹಸ್ರಚಂದ್ರ ಸಭೆಯಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು. 

‘ಜನಸಂಖ್ಯೆ  ಕುಸಿತ ಹಾಗೂ ಸಂಸ್ಕೃತಿಯ ತೀವ್ರ ಹಿನ್ನಡೆ, ನೈತಿಕತೆ ಪತನದಂತಹ ಸಮಸ್ಯೆಗಳನ್ನು ಹವ್ಯಕ ಸಮುದಾಯವೂ ಎದುರಿಸುತ್ತಿದೆ. ಹವ್ಯಕ ಸಮುದಾಯವು ಸುಟ್ಟ ಮನೆಯಂತೆ ಜ್ವಲಿಸುತ್ತಿದೆ. ಈ ಬೆಂಕಿ ಆರಿಸಲು ನೀರು ಸಾಲುತ್ತಿಲ್ಲ. ಯುವಕ–ಯುವತಿಯರು ಧರ್ಮಸಮ್ಮತವಲ್ಲದ ವಿಧಾನದಿಂದ ಶರೀರ ಮತ್ತು ಮನಸ್ಸಿನ ಅಪೇಕ್ಷೆ ಪೂರೈಸಿಕೊಳ್ಳುತ್ತಿದ್ದಾರೆ. ಅದಕ್ಕೆ ಆಧುನಿಕ ವಿಜ್ಞಾನ ಸಮ್ಮತಿ ಸೂಚಿಸುತ್ತಿದೆ. ಈ ವಿಜ್ಞಾನವು ಅಧರ್ಮದ ಮಾರ್ಗದಲ್ಲಿ ಸಾಗುವ ದಾರಿ ತೋರಿಸುತ್ತಿದೆ. ಈ ಮಾರ್ಗದಿಂದ ರೋಗಿಯಾದರೆ ಅದಕ್ಕೆ ಔಷಧವಿದೆ ಎನ್ನುತ್ತದೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಹಾಗೂ ಗಂಡು ಮಕ್ಕಳಿಗೆ 21 ವರ್ಷಕ್ಕೆ ವಿವಾಹ ಮಾಡಿಸುವುದೇ ಪರಿಹಾರೋಪಾಯ’ ಎಂದರು.

ADVERTISEMENT

‘ವಿವಾಹದ ಬಳಿಕವೂ ಶಿಕ್ಷಣ ಮುಂದುವರಿಸಿ, ಉದ್ಯೋಗ ಮಾಡಬಹುದಾಗಿದೆ. ತಮಿಳು ಬ್ರಾಹ್ಮಣರಲ್ಲಿ ಕನಿಷ್ಠ ವಯೋಮಿತಿಗೆ ವಿವಾಹ ಮಾಡಲಾಗುತ್ತಿದೆ. ಸೂಕ್ತ ವಯಸ್ಸಿಗೆ ಶಾಸ್ತ್ರೀಯ ವಿವಾಹವಾದರೆ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಹವ್ಯಕ ಸಂತತಿ ವೃದ್ಧಿಗೆ ಹೆಚ್ಚಿನ ಮಕ್ಕಳನ್ನು ಸಮುದಾಯದವರು ಪಡೆಯಬೇಕಿದೆ. ಮೂರಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದವರು ಆ ಮಕ್ಕಳನ್ನು ಮಠಕ್ಕೆ ಒಪ್ಪಿಸಿದಲ್ಲಿ ಅವರನ್ನು ನಾವು ನೋಡಿಕೊಳ್ಳುತ್ತೇವೆ. ಪಾರಮಾರ್ಥಿಕ ಸಾಧನೆಗೆ ನಿತ್ಯ ಗೀತಾ ಪಾರಾಯಣ ಮಾಡಬೇಕು. ಹವ್ಯಕರು ಯಾವಾಗಲೂ ಬ್ರಾಹ್ಮಣರಾಗಿಯೇ ಉಳಿಯಬೇಕು’ ಎಂದು ಹೇಳಿದರು.

ಆಡಂಬರಕ್ಕೆ ಆದ್ಯತೆ ಬೇಡ: ಸ್ವರ್ಣವಲ್ಲಿ ಮಠದ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ, ‘ಹವ್ಯಕರು ಇತ್ತೀಚೆಗೆ ಅನಿವಾರ್ಯ ಹಾಗೂ ಆಕರ್ಷಣೆಯಿಂದ ನಗರಕ್ಕೆ ಹೋಗುತ್ತಿದ್ದಾರೆ. ಎಲ್ಲೇ ಇದ್ದರೂ ತಮ್ಮ ಮೂಲವನ್ನು ಮರೆಯಬಾರದು. ಕೃಷಿಯನ್ನು ಮುನ್ನಡೆಸಿಕೊಂಡು ಸಾಗುವ ಜತೆಗೆ ಮಕ್ಕಳಲ್ಲಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಬೇಕು. ವಿವಾಹ ಮೊದಲಾದ ಶುಭಕಾರ್ಯದಲ್ಲಿ ಆಡಂಬರಕ್ಕೆ ಆದ್ಯತೆ ನೀಡದೆ, ವಿಧಿವಿಧಾನಕ್ಕೆ ಆದ್ಯತೆ ನೀಡಬೇಕು. ಹವ್ಯಕ ಸಮುದಾಯ ವೃದ್ಧಿಗೆ ಮೂರು ಮಕ್ಕಳನ್ನಾದರು ಹೊಂದಬೇಕು. ಒಬ್ಬರು ವೇದ–ಸಂಸ್ಕೃತಿ ರಕ್ಷಣೆಗಾದರೆ, ಇನ್ನೊಬ್ಬರು ದೇಶ ರಕ್ಷಣೆಗೆ, ಮತ್ತೊಬ್ಬರನ್ನು ಕೃಷಿ ಮತ್ತು ಕುಟುಂಬ ರಕ್ಷಣೆಗೆ ಬಿಡಬೇಕು’ ಎಂದರು.

ರಾಮಕೃಷ್ಣ ಆಶ್ರಮದ ಚಂದ್ರೇಶಾನಂದಜೀ ಮಹಾರಾಜ್, ಶಾಸಕ ಅಶೋಕ್ ಕುಮಾರ್ ರೈ, ಸಮ್ಮೇಳನದ ಗೌರವಾಧ್ಯಕ್ಷರೂ ಆಗಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಉಪಸ್ಥಿತರಿದ್ದರು.

ಯೋಗ್ಯತೆ ಸಾಮರ್ಥ್ಯದಿಂದ ಹವ್ಯಕರು ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಈ ಸಮುದಾಯದವರಲ್ಲಿ ಜಾತಿಯ ಮಾತಾಂಧತೆಯಿಲ್ಲ
ಎಚ್.ಕೆ. ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ವೈಜ್ಞಾನಿಕ ಯುಗದಲ್ಲಿ ಹವ್ಯಕರನ್ನು ಮುಂದೆ ಕೊಂಡೊಯ್ಯುವ ಜವಾಬ್ದಾರಿ ಸಮುದಾಯದ ಯುವಜನರ ಮೇಲಿದೆ. ಬದುಕು ರೂಪಿಸಿಕೊಟ್ಟ ತಂದೆ–ತಾಯಿಯನ್ನು ಮರೆಯಬಾರದು
ಭೀಮೇಶ್ವರ ಜೋಷಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ

ಪೂರ್ವಾಶ್ರಮದ ತಂದೆ–ತಾಯಿಗೆ ಗೌರವ

ಹವ್ಯಕ ಗುರುಪೀಠಗಳಿಗೆ ಯತಿಗಳನ್ನು ನೀಡಿದ ಪೂರ್ವಾಶ್ರಮದ ತಂದೆ–ತಾಯಿಗಳಿಗೆ ಹವ್ಯಕ ಮಹಾಸಭೆ ವತಿಯಿಂದ ಸನ್ಮಾನ ಮಾಡಲಾಯಿತು. ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ತಂದೆ ಶ್ರೀನಿವಾಸ ಭಟ್ ಚದರವಳ್ಳಿ ಮತ್ತು ತಾಯಿ ವಿಜಯಲಕ್ಷ್ಮಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ತಾಯಿ ಶರಾವತಿ ಶಿವರಾಮ ಭಟ್ ನಡಗೋಡು ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಅವರ ಸಹೋದರ ಲಕ್ಷ್ಮೀಕಾಂತ್ ಗಣಪತಿ ಭಟ್ ಈರಾಪುರ ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ ಅವರ ತಂದೆ ಗಣಪತಿ ಸೀತಾರಾಮ ಭಟ್ ಮಾಳಗಿಮನೆ ಮತ್ತು ತಾಯಿ ಸುನಂದಾ ಗಣಪತಿ ಭಟ್ ಅವರನ್ನು ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ 81 ಯೋಧರಿಗೆ ‘ಹವ್ಯಕ ದೇಶರತ್ನ ಪುರಸ್ಕಾರ’ ಹಾಗೂ 81 ಸಾಧಕರಿಗೆ ‘ಹವ್ಯಕ ಸ್ಫೂರ್ತಿರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.