ಬೆಂಗಳೂರು: ಸರ್ಕಾರಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಕಂಕರ ರಾಮಕೃಷ್ಣ ರೆಡ್ಡಿ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಹುದ್ದೆಗೆ ನೇಮಿಸಿ ಇದೇ 20ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಅಧಿಸೂಚನೆ ಪ್ರಶ್ನಿಸಿ ನಿಕಟಪೂರ್ವ ಕುಲಸಚಿವ ಸಿ. ಶಿವರಾಜು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಅರ್ಜಿಯ ಮುಂದಿನ ವಿಚಾರಣೆವರೆಗೆ ಮಧ್ಯಂತರ ತಡೆ ನೀಡಿದೆ.
ಪ್ರತಿವಾದಿಗಳಾದ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿವಿ ರಿಜಿಸ್ಟ್ರಾರ್ ಹಾಗೂ ಕಂಕರ ರಾಮಕೃಷ್ಣ ರೆಡ್ಡಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಮಾರ್ಚ್ 4ಕ್ಕೆ ವಿಚಾರಣೆ ಮುಂದೂಡಿದೆ. ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ–2000ಕ್ಕೆ ವಿರುದ್ಧವಾಗಿ ಕಂಕರ ರಾಮಕೃಷ್ಣ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ’ ಎಂಬುದು ಅರ್ಜಿದಾರರ ಆಕ್ಷೇಪ.
11ನೇ ‘ಇಂಡಿಯಾವುಡ್ ಪ್ರದರ್ಶನ’ಕ್ಕೆ ಚಾಲನೆ
ಬೆಂಗಳೂರು: ಪೀಠೋಪಕರಣಗಳ ಕ್ಷೇತ್ರದಲ್ಲಿ ಅತಿದೊಡ್ಡ ಹೆಸರಾಗಿರುವ ನುರ್ನ್ಬರ್ಗ್ ಮೆಸ್ಸಿ ಆಶ್ರಯದಲ್ಲಿ 11ನೇ ಇಂಡಿಯಾವುಡ್ ಮೇಳವು ನಗರದ ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭಗೊಂಡಿತು.
ನುರ್ನ್ಬರ್ಗ್ ಮೆಸ್ಸಿ ಇಂಡಿಯಾದ ಅಧ್ಯಕ್ಷೆ ಸೋನಿಯಾ ಪ್ರಶಾರ್ ಅವರು ಪ್ರದರ್ಶನ ಉದ್ಘಾಟಿಸಿದರು. ಐದು ದಿನಗಳ ಕಾಲ (ಮಾರ್ಚ್ 2ರವರೆಗೆ) ನಡೆಯುವ ಈ ಪ್ರದರ್ಶನದಲ್ಲಿ ಪೀಠೋಪಕರಣ ತಯಾರಿಕೆ ತಂತ್ರಜ್ಞಾನ, ಮರೋದ್ಯಮದ ಯಂತ್ರಗಳು, ಫಿಟ್ಟಿಂಗ್ಸ್, ಕಚ್ಚಾವಸ್ತುಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿ
ಸಲಾಗಿದೆ. 50 ದೇಶಗಳ 900 ಪ್ರದರ್ಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.