ADVERTISEMENT

ಕೋಮುವಾದ, ಜಾತೀಯತೆ ದೇಶಕ್ಕೆ ಮಾರಕ: ಸಚಿವ ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 16:06 IST
Last Updated 7 ಫೆಬ್ರುವರಿ 2026, 16:06 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ಬೆಂಗಳೂರು: ‘ಸಮಾಜದಲ್ಲಿ ತಾಂಡವವಾಡುತ್ತಿರುವ ಕೋಮುವಾದ, ಜಾತೀಯತೆ ಹಾಗೂ ಮತೀಯವಾದವನ್ನು ಅಂಬೇಡ್ಕರ್‌ ವಾದ ಎಂಬ ಹೋರಾಟದ ಮೂಲಕ ಹಿಮ್ಮೆಟ್ಟಿಸಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು. 

ರಮಾಬಾಯಿ ಅಂಬೇಡ್ಕರ್‌ ಅವರ 128ನೇ ಜನ್ಮದಿನದ ಅಂಗವಾಗಿ ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಶನಿವಾರ ಆಯೋಜಿಸಿದ್ದ ಶೋಷಿತ ಸಮುದಾಯಗಳ ವಿಮೋಚನಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಕೋಮುವಾದ, ಜಾತೀಯತೆಯು ದೇಶದ ಅಭಿವೃದ್ಧಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾರಕವಾಗಿದೆ. ಇವುಗಳ ವಿರುದ್ಧ ಹೋರಾಟದ ಬೆನ್ನೆಲುಬು ಆಗಿರುವ ಅಂಬೇಡ್ಕರ್‌ ವಾದವನ್ನು ನಾವು ಜೀವಂತವಾಗಿರಿಸಬೇಕು. ಈ ದೇಶದಲ್ಲಿರುವ ಬಹುತ್ವ ಸಮುದಾಯಗಳ ಹಿತರಕ್ಷಣೆಯನ್ನು ಬಯಸಿದ್ದ ರಮಾಬಾಯಿ ಅಂಬೇಡ್ಕರ್‌ ಅವರಂತಹ ಸಮಾಜಕ್ಕೆ ಸೇರಿದ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ರಮಾಬಾಯಿ ಅವರ ಆದರ್ಶಗಳನ್ನು ಮನೆ–ಮನೆಗೂ ತಲುಪಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು. 

ADVERTISEMENT

‘ವೈಯಕ್ತಿಕ ಜೀವನ ಎಂಬುದು ಮನುಷ್ಯನಿಗೆ ಸಹಜವಾಗಿ ಇರುವ ಆದ್ಯತೆ. ಅದರಲ್ಲೂ ಕುಟುಂಬ ಎಂಬ ಸಮಾಜದ ಮೂಲ ಘಟಕವನ್ನು ನಿರ್ವಹಿಸುವಲ್ಲಿ ಮಹಿಳೆಯರ ಪಾತ್ರವೂ ದೊಡ್ಡದು. ಎಲ್ಲಾ ಜನರ ಬದುಕನ್ನು ಹಸನಾಗಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ ದೇಶದ ಸಂವಿಧಾನ ಮತ್ತು ಇಲ್ಲಿನ ಶೋಷಿತರ ಬದುಕಿನ ಏಳಿಗೆಗಾಗಿ ಡಾ.ಬಿ.ಆರ್. ಅಂಬೇಡ್ಕರ್‌ ಮಾಡಿದ ಅಧ್ಯಯನ ಹಾಗೂ ಪ್ರಯತ್ನಗಳ ಹಿಂದೆ ರಮಾಬಾಯಿ ಅವರು ಇದ್ದರು’ ಎಂದು ಸ್ಮರಿಸಿದರು.

ರಾಜಸ್ಥಾನದ ಹೈಕೋರ್ಟ್‌ ಆವರಣದಲ್ಲಿರುವ ಮನು ಪ್ರತಿಮೆಗೆ ಮಸಿ ಬಳಿದಿದ್ದ ಮಹಾರಾಷ್ಟ್ರದ ಕಾಂತಾಬಾಯಿ ಹಾಗೂ ಶೀಲಾ ಪವಾರ್‌ ಅವರನ್ನು ಸನ್ಮಾನಿಸಲಾಯಿತು. 

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ, ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್‌ನ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಎಸ್‌ಸಿ ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.