ಬೆಂಗಳೂರು: ‘ಜನರಲ್ಲಿ ಓದುವ ಅಭ್ಯಾಸ ಕಡಿಮೆಯಾಗುತ್ತಿರುವ ಮತ್ತು ಸಾಂವಿಧಾನಿಕ ಸಂಸ್ಥೆಗಳು ಹಂತ
ಹಂತವಾಗಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಪತ್ರಕರ್ತರು, ಜಾತಿ ಅಥವಾ ಮತ್ಯಾವುದೇ ಹಂಗಿಗೆ ಒಳಗಾಗದಂತೆ ಕಾರ್ಯ ನಿರ್ವಹಿಸಬೇಕಿದೆ’ ಎಂದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪತ್ರಕರ್ತ ಆರ್.ಟಿ.ವಿಠ್ಠಲ ಮೂರ್ತಿ ಅವರ, ‘ಇದೊಂಥರಾ ಆತ್ಮಕಥೆ’ ಪುಸ್ತಕ ಬಿಡುಗಡೆ ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ದೃಶ್ಯ ಮಾಧ್ಯಮಗಳು ಇಂದು ನಕಾರಾತ್ಮಕ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದು, ಭವಿಷ್ಯದಲ್ಲಿ ಸಮಾಜ ಎತ್ತ ಸಾಗಬಹುದು ಎಂಬ ದಿಗಿಲು ಕಾಡುತ್ತಿದೆ’ ಎಂಬ ಆತಂಕ ವ್ಯಕ್ತಪಡಿಸಿದರು.
ಎಲ್ಲಿಗೆ ಹೋಗಿ ತಲುಪಲಿದ್ದೇವೆ?: ’ಮಾಧ್ಯಗಳು ಅದರಲ್ಲೂ ದೃಶ್ಯ ಮಾಧ್ಯಮಗಳೇಕೆ ಈ ರೀತಿ ವರ್ತಿಸುತ್ತಿವೆ" ಎಂದು ಪ್ರಶ್ನಿಸಿದ ಅವರು, ‘ಸಮಾಜದ ಕಾವಲುಗಾರ ಸ್ಥಾನದಲ್ಲಿರುವ ದೃಶ್ಯ ಮಾಧ್ಯಮಗಳು ನೀಡುತ್ತಿರುವ ನಕಾರಾತ್ಮಕ ಸುದ್ದಿಗಳಿಂದ ನಾವೆತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.
‘ಇಂದಿನ ದಿನಗಳಲ್ಲಿ ಟಿ.ವಿ ಚಾನೆಲ್ಗಳು, ಸಮಾಜ ಏನಾದ್ರೂ ಆಗಲಿ, ತಾವು ಮಾತ್ರ ಬದುಕಿದರೆ ಸಾಕು ಎಂಬಂತಹ ಸ್ಥಿತಿ ತಲುಪಿವೆ. ಜನರಿಗೆ ಬೇಡವಾದ ಕೆಟ್ಟ ಸುದ್ದಿಗಳನ್ನೇ ಬಿತ್ತರಿಸುತ್ತಾ ಸಮಾಜದ ಸ್ವಾಸ್ಥ್ಯ ಹಾಳು ಮಾಡಿವೆ’ ಎಂದು ಟೀಕಿಸಿದರು.
ಶಾಸಕ ಡಿ.ಕೆ.ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿರುವ ಕುರಿತಂತೆ ಕೇಳಲಾದ ಪ್ರಶ್ನೆಗೆ, ‘ಸಾರ್ವಜನಿಕ ಜೀವನದಲ್ಲಿ ಇರುವವರು ಇಂತಹ ಸಂಗತಿಗಳನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.