ಅಮಾನತು
ಬೆಂಗಳೂರು: ಅಂಗವಿಕಲ ವ್ಯಕ್ತಿಯಿಂದ ₹37 ಸಾವಿರ ಸುಲಿಗೆ ಮಾಡಿದ್ದ ಆರೋಪದ ಅಡಿ ಇಂದಿರಾನಗರ ಠಾಣೆಯ ಹೆಡ್ ಕಾನ್ಸ್ಟೆಬಲ್ ಶರಣ್ ಬಸಪ್ಪ ಪೂಜಾರಿ ಮತ್ತು ಕಾನ್ಸ್ಟೆಬಲ್ ಪರಮೇಶ್ವರ ನಾಯಕ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಜೂನ್ 14ರ ರಾತ್ರಿ ಇಂದಿರಾನಗರ 100 ಅಡಿ ರಸ್ತೆಯಲ್ಲಿ ಇರುವ ಪಬ್ನಿಂದ ಹೊರಬಂದಿದ್ದ ಅಂಗವಿಕಲ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ತಡೆದಿದ್ದರು. ‘ತಮ್ಮನ್ನು ಮಾದಕದ್ರವ್ಯ ಪರೀಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಹೆದರಿಸಿದ್ದರು. ಹಣಕ್ಕೆ ಬೇಡಿಕೆ ಇಟ್ಟಿದ್ದರು.
ದ್ವಿಚಕ್ರ ವಾಹನದಲ್ಲಿ ಎಟಿಎಂಗೆ ಕರೆದೊಯ್ದು ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ನಂತರ, ₹40 ಸಾವಿರ ಪಡೆದು ಬಿಟ್ಟು ಕಳುಹಿಸಿದ್ದರು. ಘಟನೆಯ ಬಳಿಕ ಅಂಗವಿಕಲ ವ್ಯಕ್ತಿ ಎನ್ಜಿಒವೊಂದನ್ನು ಸಂಪರ್ಕಿಸಿದ್ದರು. ಇಂದಿರಾನಗರ ಠಾಣೆಯ ಇನ್ಸ್ಪೆಕ್ಟರ್ ಮತ್ತು ಹಿರಿಯ ಅಧಿಕಾರಿಗಳನ್ನು ಎನ್ಜಿಒ ಅಧಿಕಾರಿಗಳು ಸಂಪರ್ಕಿಸಿ ದೂರು ನೀಡಿದ್ದರು.
‘ದೂರು ಆಧರಿಸಿ ಪ್ರಾಥಮಿಕ ವಿಚಾರಣೆ ನಡೆಸಿದಾಗ ಇಬ್ಬರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಇಬ್ಬರನ್ನೂ ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.