ಪ್ರಜಾವಾಣಿ ವಾರ್ತೆ
ಕೆ.ಆರ್.ಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಸಮಾಜ ಸೇವಾ ಸಮಿತಿ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ವೈಟ್ಫೀಲ್ಡ್ ಸಮೀಪದ ಗಾಂಧಿಪುರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರದಲ್ಲಿ ಪ್ರತಿಷ್ಠಿತ ವೈದೇಹಿ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ವೈಟ್ಫೀಲ್ಡ್ ಆಸ್ಟರ್ ಆಸ್ಪತ್ರೆ, ಬ್ರೂಕ್ ಫೀಲ್ಡ್ ಆಸ್ಪತ್ರೆ, ಗ್ಲೋಬಲ್ ಐ ಫೌಂಡೇಷನ್, ಸಾಯಿ ಆಪ್ಟಿಕಲ್, ಕಾವೇರಿ ಆಸ್ಪತ್ರೆ ಸೇರಿದಂತೆ ಮೊದಲಾದ ಆಸ್ಪತ್ರೆಗಳ ನುರಿತ ವೈದ್ಯರ ತಂಡ ಪಾಲ್ಗೊಂಡಿದ್ದರು.
ಸಾಮಾನ್ಯ ರೋಗಗಳ ತಪಾಸಣೆ, ಹೃದಯ ಸಂಬಂಧಿ ಕಾಯಿಲೆ, ಕಿವಿ, ಹಲ್ಲು, ಕಣ್ಣಿನ ತಪಾಸಣೆ, ಇಸಿಜಿ, ಮಧುಮೇಹ ಸೇರಿದಂತೆ ವಿವಿಧ ರೋಗಗಳ ತಪಾಸಣೆ ನಡೆಸಲಾಯಿತು. ಅಗತ್ಯವಿರುವವರಿಗೆ ಔಷಧಿ, ಕನ್ನಡಕ, ನಡಿಗೆ ಕೋಲು, ವ್ಹೀಲ್ ಚೇರ್ ವಿತರಿಸಲಾಯಿತು. ಎರಡು ಸಾವಿರಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಯುವ ಘಟಕದ ರಾಜ್ಯಾಧ್ಯಕ್ಷ ಎ.ರಾಜು ಮಾತನಾಡಿ, ಈ ಭಾಗದಲ್ಲಿ ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ 13 ವರ್ಷಗಳಿಂದ ನಮ್ಮ ಸಂಘಟನೆ ಆರೋಗ್ಯ ಶಿಬಿರ ಹಮ್ಮಿಕೊಂಡು ಬರುತ್ತಿದೆ’ ಎಂದರು.
ಈ ಸಂಧರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಹೆಬ್ಬಾಳ್ ವೆಂಕಟೇಶ್, ಕರ್ನಾಟಕ ದಲಿತ ಕ್ರೀಯಾ ವೇದಿಕೆ ರಾಜ್ಯಾಧ್ಯಕ್ಷ ಕಾಡುಗುಡಿ ಸೊಣ್ಣಪ್ಪ, ಬೆಳತ್ತೂರು ವೆಂಕಟೇಶ್, ಶಕುಂತಲಾಮ್ಮ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.