ADVERTISEMENT

ಶಶ್ತ್ರಚಿಕಿತ್ಸೆ ನಡೆಸದೆಯೇ ಹೃದಯ ಕವಾಟ ಬದಲಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 21:53 IST
Last Updated 18 ಫೆಬ್ರುವರಿ 2021, 21:53 IST

ಬೆಂಗಳೂರು: ಹೃದಯ ಸಮಸ್ಯೆ ಎದುರಿಸುತ್ತಿದ್ದ 78 ವರ್ಷದ ವೃದ್ಧೆಗೆ ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸದೆಯೇಹೃದಯ ಕವಾಟ ಬದಲಿಸಿದ್ದಾರೆ.

ವೃದ್ಧೆಯು 2013ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ವೇಳೆ ಅವರಿಗೆ ಕೃತಕ ಹೃದಯ ಕವಾಟ ಅಳವಡಿಕೆ ಮಾಡಲಾಗಿತ್ತು. ಆದರೆ, ಎರಡು ವರ್ಷಗಳಿಂದ ಆ ಕವಾಟ ಕ್ಷೀಣಿಸುತ್ತಿತ್ತು. ಹಾನಿಯ ಪ್ರಮಾಣವು ಗಂಭೀರ ಸ್ವರೂಪ ಪಡೆದ ಬಳಿಕ ಅವರಿಗೆ ಹೃದಯದ ಭಾಗದಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿತು. ಇದರಿಂದಾಗಿ ಜನವರಿಯಲ್ಲಿ ಆಸ್ಪತ್ರೆಗೆ ದಾಖಲಾದರು. ಹೃದಯ ವೈಫಲ್ಯದ ಲಕ್ಷಣಗಳು ಕೂಡ ಅವರಲ್ಲಿ ಕಾಣಿಸಿಕೊಂಡಿದ್ದವು. ಉಸಿರಾಟ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದ ಕಾರಣ ಮತ್ತೊಮ್ಮೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದಿರಲು ನಿರ್ಧರಿಸಲಾಯಿತು ಎಂದು ಆಸ್ಪತ್ರೆ ತಿಳಿಸಿದೆ.

ಅಧಿಕ ವಯಸ್ಸು ಹಾಗೂ ಅನಾರೋಗ್ಯ ಸಮಸ್ಯೆಗಳು ಕೃತಕ ಕವಾಟವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಗೆ ಅಡ್ಡಿಯಾಗಿತ್ತು. ಇದರಿಂದಾಗಿ ಹೃದ್ರೋಗ ತಜ್ಞರು ಟ್ರಾನ್ಸ್ಕ್ಯಾಟರ್ ಮಿಟ್ರಲ್ ಕವಾಟ ಬದಲಾವಣೆ (ಸಣ್ಣ ರಂಧ್ರದ ಮೂಲಕ ಬದಲಾವಣೆ) ವಿಧಾನ ಅನುಸರಿಸಿದರು. 4 ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು. ಈಗ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

ADVERTISEMENT

‘ವಯಸ್ಸಾದ ರೋಗಿಗಳು ಹಾಗೂ ಗಂಭೀರ ಕಾಯಿಲೆಗಳನ್ನು ಎದುರಿಸುತ್ತಿರುವವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯು ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಅಂತಹವರಿಗೆ ನೂತನ ವಿಧಾನವು ಸಹಕಾರಿಯಾಗಿದೆ. ಇದು ಫಲಿತಾಂಶವನ್ನೂ ನೀಡಲಿದೆ’ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಎಸ್. ವೆಂಕಟೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.