ಬೆಂಗಳೂರು:ಮಂಗಳವಾರ ಇಡೀ ರಾತ್ರಿ ಆರ್ಭಟಿಸಿ ಸುರಿದ ಮಳೆ ಬೆಂಗಳೂರನ್ನು ಸಂಪೂರ್ಣವಾಗಿ ತೊಪ್ಪೆಯಾಗಿಸಿದೆ. ರಸ್ತೆಗಳೆಲ್ಲಾ ನದಿಗಳಾಗಿ ಹರಿದರೆ, ರಾಜಕಾಲುವೆಗಳು ಉಕ್ಕಿ ಹರಿದವು. ಮನೆಗಳು, ಅಂಗಡಿ–ಮುಂಗಟ್ಟುಗಳು ಜಲಾವೃತಗೊಂಡರೆ, ವಾಹನಗಳುನೀರಿನಲ್ಲಿ ಮುಳುಗೆದ್ದವು.
ಮಂಗಳವಾರ ಸಂಜೆ ವೇಳೆಗೆ ಆರಂಭವಾದ ಮಳೆಯ ಅಬ್ಬರ ರಾತ್ರಿ ನಂತರ ಹೆಚ್ಚಾಯಿತು. ರಾಜಧಾನಿಯ ಯಾವ ಭಾಗವನ್ನೂ ಬಿಡದ ಮಳೆ ಧಾರಾಕಾರವಾಗಿ ಸುರಿಯಿತು. ಬೆಳಿಗ್ಗೆ ವಾಹನಗಳೊಂದಿಗೆ ಮನೆಯಿಂದ ಹೊರಗೆ ಬಂದ ಜನರಿಗೆ ರಸ್ತೆಯೋ, ನದಿಯೋ ಎಂಬ ಅನುಮಾನ ಹುಟ್ಟಿಸುವಷ್ಟು ನೀರು ರಸ್ತೆಯನ್ನು ಆವರಿಸಿತ್ತು.
ಹೊರಮಾವು, ಎಚ್ಬಿಆರ್ ಲೇಔಟ್, ಸಹಕಾರ ನಗರ, ಚಿಕ್ಕಬಾಣಾವರ, ರಾಮಮೂರ್ತಿ ನಗರ, ಹೆಣ್ಣೂರು ಸುತ್ತಮುತ್ತಲ ಬಡಾವಣೆಗಳ ಮನೆಗಳು ಜಲಾವೃತಗೊಂಡಿದ್ದವು. ಚಿಕ್ಕಬಾಣಾವರ ಕೆರೆ ಕೋಡಿ ತುಂಬಿ ಹರಿದು ನೂರಾರು ಮನೆಗಳು ಜಲಾವೃತಗೊಂಡವು.ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಬೈಕ್ಗಳು ನೀರಿನಲ್ಲಿ ತೇಲಾಡಿದವು. ಅಂಗಡಿ– ಮುಂಗಟ್ಟುಗಳಿಗೂ ನುಗ್ಗಿದ್ದ ನೀರನ್ನು ಜನ ದಿನವಿಡೀ ಹೊರ ಹಾಕಿದರು.
ಟಿ.ಸಿ. ಪಾಳ್ಯದ ಪಟಾಕಿ ಗೋದಾಮು ಸಂಪೂರ್ಣ ಜಲವೃತಗೊಂಡಿತ್ತು. ದಾಸರಹಳ್ಳಿ ವ್ಯಾಪ್ತಿಯ ಚೊಕ್ಕಸಂದ್ರ, ರುಕ್ಮಿಣಿನಗರ, ವಿದ್ಯಾನಗರ, ಬೇಲ್ಮಾರ್ ಲೇಔಟ್ನಲ್ಲಿ ಸಾವಿರಾರು ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದರು. ಮಳೆ ಬಂದಾಗಲೆಲ್ಲಾ ಎದುರಾಗುವ ಇದೇ ಸಮಸ್ಯೆಯಿಂದ ರೋಸಿ ಹೋಗಿರುವ ನಿವಾಸಿಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.