ADVERTISEMENT

ಬೆಂಗಳೂರು: ಸಿಡಿಲು ಬಡಿದು ತರಕಾರಿ ವ್ಯಾಪಾರಿ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 17:16 IST
Last Updated 10 ಅಕ್ಟೋಬರ್ 2021, 17:16 IST
ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿರುವುದು
ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟಿರುವುದು   

ಬೆಂಗಳೂರು: ನಗರದಲ್ಲಿ ಭಾನುವಾರ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಮರದ ಕೆಳಗೆ ಆಶ್ರಯ ಪಡೆದಿದ್ದ ತಿಪ್ಪೇಸ್ವಾಮಿ (46) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದು, ಜೊತೆಗಿದ್ದ ಅವರ ಮಗ ಚಿದಾನಂದ (22) ತೀವ್ರವಾಗಿ ಗಾಯಗೊಂಡಿದ್ದಾರೆ.

‘ತುಮಕೂರಿನ ತಿಪ್ಪೇಸ್ವಾಮಿ, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಟಿ.ದಾಸರಹಳ್ಳಿಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ನೆಲೆಸಿದ್ದರು. ತರಕಾರಿ ವ್ಯಾಪಾರ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮಗ ಚಿದಾನಂದ ಜೊತೆಯಲ್ಲಿ ತಿಪ್ಪೇಸ್ವಾಮಿ ಅವರು ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ಭಾನುವಾರ ಬೆಳಿಗ್ಗೆ ಬೈಕ್‌ನಲ್ಲಿ ಹೋಗಿದ್ದರು. ಅಲ್ಲಿಂದ ವಾಪಸು ನೈಸ್ ರಸ್ತೆ ಮೂಲಕ ಸಂಜೆ ಮನೆಯತ್ತ ಬರುತ್ತಿದ್ದರು. ಇದೇ ಸಂದರ್ಭದಲ್ಲೇ ಜೋರು ಮಳೆ ಶುರುವಾಗಿತ್ತು. ಸಿಡಿಲು–ಗುಡುಗಿನ ಅಬ್ಬರವೂ ಹೆಚ್ಚಿತ್ತು’ ಎಂದರು.

ADVERTISEMENT

‘ರಸ್ತೆ ಪಕ್ಕದಲ್ಲಿ ಬೈಕ್‌ ನಿಲ್ಲಿಸಿದ್ದ ತಂದೆ– ಮಗ, ಸಮೀಪದಲ್ಲಿದ್ದ ಮರದ ಕೆಳಗೆ ನಿಂತುಕೊಂಡಿದ್ದರು. ಇದೇ ಸಂದರ್ಭದಲ್ಲೇ ಸಿಡಿಲು ಬಡಿದು ತಿಪ್ಪೇಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ಚಿದಾನಂದ ಅವರನ್ನು ಗಸ್ತು ವಾಹನದ ಸಿಬ್ಬಂದಿ ಆಸ್ಪತ್ರೆಗೆ ಸೇರಿಸಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.