ಬೆಂಗಳೂರು: ಹೆಬ್ಬಾಳ ಜಂಕ್ಷನ್ ಬಳಿ ನಿರ್ಮಾಣವಾಗಿರುವ 700 ಮೀಟರ್ ಉದ್ದದ ಪಥದಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೊನೆಗೂ ಅವಕಾಶ ನೀಡಿದೆ.
ಇದು ವಾಹನ ದಟ್ಟಣೆ ನಿವಾರಣೆಗೆ ಸಹಕಾರಿಯಾಗಿದ್ದು, ಈ ಪಥವು (ಲೂಪ್) ಕೆ.ಆರ್. ಪುರವನ್ನು ಸಂಪರ್ಕಿಸಲಿದೆ. ಸುಮಾರು ಎರಡು ವಾರಗಳ ಹಿಂದೆಯೇ ಸಿದ್ಧವಾಗಿದ್ದರೂ, ಉದ್ಘಾಟನಾ ಸಮಾರಂಭದ ಕಾರಣ ಬಿಡಿಎ ಇಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.
ಇತ್ತೀಚೆಗೆ ಮೇಲ್ಸೇತುವೆ ಪರಿಶೀಲಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುಮತಿ ಪಡೆದ ಬಳಿಕ ಎಲಿವೇಟೆಡ್ ಲೂಪ್ ಅನ್ನು ಉದ್ಘಾಟಿಸಲಾಗುವುದು’ ಎಂದು ಹೇಳಿದ್ದರು. ಅದಾಗಿಯೂ, ಬಿಡಿಎ ಪ್ರಾಯೋಗಿಕವಾಗಿ ಬುಧವಾರ ಮಧ್ಯಾಹ್ನದಿಂದ ಸಂಚಾರಕ್ಕೆ ಅವಕಾಶ ನೀಡಿದೆ.
‘ಹೊಸದಾಗಿ ನಿರ್ಮಿಸಲಾದ ಈ ಲೂಪ್ನಲ್ಲಿ ನಿರೀಕ್ಷೆಯಂತೆ ಹೆಚ್ಚಿನ ದಟ್ಟಣೆ ಕಂಡುಬಂದಿಲ್ಲ’ ಎಂದು ಸಂಚಾರ ಪೊಲೀಸರು ತಿಳಿಸಿದರು.
ಕೊಡಿಗೇಹಳ್ಳಿ, ಸಹಕಾರನಗರ ಒಳಗೊಂಡಂತೆ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕಡೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆಯಲ್ಲಿ ಎರಡು ಪಥಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಲೂಪ್ ಮೂರು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.