ADVERTISEMENT

ಬಸ್‌ ನಿಲ್ದಾಣದಲ್ಲಿ ಕುಳಿತಿದ್ದಾಗ ವಿದ್ಯುತ್‌ ಸ್ಪರ್ಶ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 15 ಮೇ 2022, 18:27 IST
Last Updated 15 ಮೇ 2022, 18:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಸ್‌ ನಿಲ್ದಾಣದಲ್ಲಿ ಕುಳಿತಿದ್ದ ಅಪರಿಚಿತ ಯುವಕ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ಸಂಬಂಧ ಹೆಬ್ಬಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಶನಿವಾರ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಮೃತರಿಗೆ ಸುಮಾರು 28 ವರ್ಷ ವಯಸ್ಸಾಗಿದೆ. ಅವರು ಬಸ್‌ಗಾಗಿ ಕಾದು ಕುಳಿತಿದ್ದರು ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಶನಿವಾರ ರಾತ್ರಿ ಮಳೆ ಸುರಿಯುತ್ತಿತ್ತು. ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹಾಕಲಾಗಿದ್ದ ಲೋಹದ ಆಸನದ ಮೇಲೆಮೃತ ಯುವಕನ ಜೊತೆ ಇನ್ನೂ ಮೂವರು ಕುಳಿತಿದ್ದರು. ವಿದ್ಯುತ್‌ ಸ್ಪರ್ಶದ ಅನುಭವವಾಗಿದ್ದರಿಂದ ಅವರು ಅಲ್ಲಿಂದ ದೂರ ಓಡಿಹೋಗಿದ್ದರು. ಚಪ್ಪಲಿ ಕೆಳಗೆ ಬಿಟ್ಟಿದ್ದ ಯುವಕ ಅದನ್ನು ಹಾಕಿಕೊಂಡು ಓಡಲು ಮುಂದಾದಾಗ ನಿಲ್ದಾಣದ ಬಳಿಯ ಫಲಕವೊಂದಕ್ಕೆ ಕೈ ತಾಗಿತ್ತು. ಆಗ ಆತನ ದೇಹದೊಳಗೆ ವಿದ್ಯುತ್‌ ಪ್ರವಹಿಸಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಅಕ್ರಮ ಜಾಹೀರಾತು ಫಲಕದಿಂದ ಅವಘಡ: ‘ಟೈಮ್ಸ್ ಇನೋವೇಟಿವ್‌ ಮೀಡಿಯಾ ಹೆಸರಿನ ಜಾಹೀರಾತು ಕಂಪನಿಯೊಂದು ನಿಲ್ದಾಣದ ಸಮೀಪದ ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ನಿಲ್ದಾಣದ ಸುತ್ತಲೂ ಜಾಹೀರಾತು ಫಲಕ ಅಳವಡಿಸಿದೆ. ಆಫಲಕದ ತಂತಿಯಿಂದ ವಿದ್ಯುತ್‌ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ’ ಎಂದು ಹೆಬ್ಬಾಳ ವಿಭಾಗದ ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜಾಹೀರಾತು ಫಲಕಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕವನ್ನು 2020ರ ಡಿಸೆಂಬರ್‌ನಲ್ಲೇ ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಕಂಪನಿಯು ಜಾಹೀರಾತು ಫಲಕ ಅಳವಡಿಸಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿಲ್ಲ. ಜಾಹೀರಾತು ಸಂಸ್ಥೆಯ ವಿರುದ್ಧ ನಾವು ದೂರು ದಾಖಲಿಸುತ್ತೇವೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.