ಹೆಸರಘಟ್ಟ: ಸೊಣೇನಹಳ್ಳಿ ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
‘ಖಾತೆ ಮಾಡಿಕೊಳ್ಳಲು ಗ್ರಾಮ ಲೆಕ್ಕಾಧಿಕಾರಿ ₹30 ಸಾವಿರ ಲಂಚ ಕೇಳಿದ್ದಾರೆ. ಎರಡು ಹೊತ್ತು ಊಟ ಮಾಡಿ ಜೀವನ ಮಾಡುವ ನಾವು ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು’ ಎಂದು ಬ್ಯಾತ ಗ್ರಾಮದ ರೈತ ನಂಜುಂಡಪ್ಪ ಅಳಲು ತೋಡಿಕೊಂಡರು.
‘ಚಲ್ಲಹಳ್ಳಿ ಸರ್ವೆ ನಂ 76ರಲ್ಲಿ 47 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಒತ್ತುವರಿಯನ್ನು ತೆರವು ಮಾಡಿರುವುದಾಗಿ ತಹಶೀಲ್ದಾರ್ ಸುಳ್ಳು ವರದಿ ನೀಡಿದ್ದಾರೆ. ಈ ಜಾಗವನ್ನು ತೆರವುಗೊಳಿಸುವ ತಾಕತ್ತು ನಿಮಗೆ ಇದೆಯಾ’ ಎಂದು ಗ್ರಾಮಸ್ಥರು ಹೆಸರಘಟ್ಟದ ವಿಶೇಷ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.
ಗ್ರಾಮಸ್ಥರ ಮಾತಿನಿಂದ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಮಧ್ಯ ಪ್ರವೇಶಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.
‘ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ಆಂಬುಲೆನ್ಸ್ ನಾಪತ್ತೆಯಾಗಿದೆ. ತುರ್ತು ಚಿಕಿತ್ಸೆಗೆ ಹೆಸರಘಟ್ಟದ ಆಂಬುಲೆನ್ಸ್ಗೆ ಕರೆ ಮಾಡಬೇಕು ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.