ಬೆಂಗಳೂರು: ‘ಸಾರ್ವಜನಿಕ ರಸ್ತೆಯಲ್ಲಿ ಶವ ಸಂಸ್ಕಾರ ಮಾಡಲಾಗಿದೆ’ ಎಂದು ಆರೋಪಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಚನ್ನಕೇಶವ ನಗರದ ಪರಪ್ಪನ ಅಗ್ರಹಾರ ರಸ್ತೆಯ ಮೊದಲ ತಿರುವಿನ ನಿವಾಸಿ ಜಿ.ನಾಗರಾಜ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ್ದು, ‘ಉಭಯ ಪಕ್ಷಗಾರರು ಮುಂದಿನ ವಿಚಾರಣೆವರೆಗೆ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂದು ತಾಕೀತು ಮಾಡಿದೆ.
‘ಸಿಂಗಸಂದ್ರ ಗ್ರಾಮದ ಹೊಸೂರು ಮುಖ್ಯ ರಸ್ತೆಯ ನಿವಾಸಿ ಪಾಪ ರೆಡ್ಡಿ ಅವರು, ತಮ್ಮ ತಂದೆಯ ಶವವನ್ನು ನನ್ನ ಮನೆಯ ಪೂರ್ವ ಭಾಗಕ್ಕಿರುವ ಸಾರ್ವಜನಿಕ ರಸ್ತೆಯಲ್ಲಿ ಸಂಸ್ಕಾರ ಮಾಡಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.
ಮಾಹಿತಿ ಪಡೆಯುತ್ತೇವೆ: ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಉತ್ತರಿಸಿರುವ ಬಿಬಿಎಂಪಿ ಪರ ವಕೀಲರು, ‘ವಿವಾದಿತ ಸ್ಥಳ ಸಾರ್ವಜನಿಕ ಸ್ಥಳ ಹೌದೊ ಅಲ್ಲವೊ ಎಂಬುದರ ಮಾಹಿತಿ ಪಡೆದು ಮುಂದಿನ ವಿಚಾರಣೆ ದಿನದಂದು ತಿಳಿಸುತ್ತೇವೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಮತ್ತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅವರು, ‘ಸ್ಥಳದಲ್ಲಿ ಕಾನೂನು ಮತ್ತು ಶಾಂತಿಗೆ ಭಂಗ ಬರುವಂತಹ ಯಾವುದೇ ಸನ್ನಿವೇಶ ಇಲ್ಲ’ ಎಂದೂ ನ್ಯಾಯಪೀಠಕ್ಕೆ ವಿವರಿಸಿದ್ದಾರೆ.
ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಎಚ್.ಸುನಿಲ್ ಕುಮಾರ್ ವಾದ ಮಂಡಿಸಿದರು. ಪ್ರಕರಣದಲ್ಲಿ, ಬಿಬಿಎಂಪಿ ಆಯುಕ್ತರು, ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ತಹಶೀಲ್ದಾರ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮತ್ತು ಪಾಪ ರೆಡ್ಡಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.