ಬೆಂಗಳೂರು: ಕೋವಿಡ್ ಕುರಿತ ಜಾಗೃತಿ ಸಂದೇಶಗಳನ್ನು ಒಳಗೊಂಡಜಾಹೀರಾತುಫಲಕಗಳನ್ನು ನಗರದಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಹಿಂಪಡೆದಿದೆ.
‘ನ್ಯಾಯಾಲಯ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ’ ಎಂದು ಮುಖ್ಯ ನ್ಯಾಯಮುರ್ತಿ ಎಸ್.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
‘ಸಾರ್ವಜನಿಕರ ಹಿತ ದೃಷ್ಟಿಯಿಂದ ಫಲಕ ಅಳವಡಿಸಿಕೊಳ್ಳಲು 2020ರ ಜುಲೈ 15ರಂದು ಅನುಮತಿ ನೀಡಲಾಗಿತ್ತು. ಆದರೆ, ಖಾಸಗಿ ಕಂಪನಿಗಳ ಲಾಂಛನಗಳನ್ನು ಬಳಸಿ ಉತ್ಪನ್ನಗಳ ಜಾಹೀರಾತಿಗೆ ಅವಕಾಶ ನೀಡಲಾಗಿದೆ. ಸರ್ಕಾರ ನ್ಯಾಯಾಲಯದ ಆದೇಶವನ್ನು ದುರ್ಬಳಕೆ ಮಾಡಿಕೊಂಡಿರುವ ಕಾರಣ ಅನುಮತಿ ವಾಪಸ್ ಪಡೆಯದೆ ಬೇರೆ ದಾರಿ ಇಲ್ಲ’ ಎಂದು ಪೀಠ ಹೇಳಿತು.
ಈಗಾಗಲೇ ಅಳವಡಿಸಿರುವ ಫಲಕಗಳನ್ನು ಎರಡು ವಾರದಲ್ಲಿ ತೆರವುಗೊಳಿಸಬೇಕು. ಜಾಹೀರಾತು ಪ್ರದರ್ಶಿಸಿದ ಖಾಸಗಿ ಕಂಪನಿಗಳಿಂದ ತೆರಿಗೆ ವಸೂಲಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಬಿಬಿಎಂಪಿಗೆ ಪೀಠ ನಿರ್ದೇಶನ ನೀಡಿತು.
‘ಖಾಸಗಿ ಕಂಪನಿಗಳ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದಆರೋಗ್ಯ ಇಲಾಖೆ ನಿರ್ದೇಶಕರ ವಿರುದ್ಧ ತನಿಖೆಗೆ ಉನ್ನತ ಅಧಿಕಾರಿಯನ್ನು ಸರ್ಕಾರ ನೇಮಿಸಬೇಕು. ಆರು ವಾರಗಳಲ್ಲಿ ತನಿಖಾ ವರದಿ ಸಲ್ಲಿಸಬೇಕು. ಜಾಹೀರಾತು ಪ್ರದರ್ಶಿಸಿದ ಖಾಸಗಿ ಸಂಸ್ಥೆಗಳಿಂದ ಹಣ ಸ್ವೀಕರಿಸಲಾಗಿದೆಯೇ ಎಂಬುದನ್ನೂ ವಿವರಿಸಬೇಕು’ ಎಂದು ಪೀಠ ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.