ಬೆಂಗಳೂರು: ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರಗಳು ಕಾನೂನಿನ ಪ್ರಕಾರ ಪರವಾನಗಿ ಪಡೆದಿವೆಯೋ, ಇಲ್ಲವೋ ಎಂಬುದರ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ವ್ಯಸನಮುಕ್ತಿ ಕೇಂದ್ರದಲ್ಲಿ ಬಲವಂತವಾಗಿ ವ್ಯಕ್ತಿಯಬ್ಬರನ್ನು ಬಂಧಿಸಿಟ್ಟ ಪ್ರಕರಣದ ವಿಚಾರಣೆ ನಡೆಸಿದ ಎಸ್.ಎನ್. ಸತ್ಯನಾರಾಯಣ ಮತ್ತು ಅಶೋಕ್ ಜಿ. ನಿಜಗಣ್ಣನವರ್ ಅವರಿದ್ದ ವಿಭಾಗೀಯ ಪೀಠ ಬುಧವಾರ ಈ ನಿರ್ದೇಶನ ನೀಡಿತು.
‘ರಾಜ್ಯದಲ್ಲಿ ಎಷ್ಟು ವ್ಯಸನ ಮುಕ್ತಿ ಕೇಂದ್ರಗಳಿವೆ, ಸಕ್ಷಮ ಪ್ರಾಧಿಕಾರದಿಂದ ಮಾನ್ಯತೆ ಪಡೆದುಕೊಳ್ಳಲಾಗಿದೆಯೇ, ಅಲ್ಲಿ ಎಷ್ಟು ಜನ ದಾಖಲಾಗಿದ್ದಾರೆ, ಅವರನ್ನು ನಿಭಾಯಿಸುವ ಸಿಬ್ಬಂದಿಗೆ ಇರುವ ಅರ್ಹತೆ ಏನು ಎಂಬುದರ ಬಗ್ಗೆ ಡಿಜಿ–ಐಜಿಪಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.16ಕ್ಕೆ ಮುಂದೂಡಿತು.
‘ಕೆಂಗೇರಿಯ ಮದ್ಯ ವ್ಯಸನಮುಕ್ತಿ ಕೇಂದ್ರದಲ್ಲಿ ರವಿ ಎಂಬಾತನನ್ನು ಬಲವಂತವಾಗಿ 235 ದಿನ ಇಟ್ಟುಕೊಂಡಿದ್ದ ಪ್ರಕರಣ ಗಮನಕ್ಕೆ ಬಂದಿದೆ. ಜನರನ್ನು ಈ ರೀತಿ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಳ್ಳಲು ಬೌನ್ಸರ್ಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಮಾಧ್ಯಮಗಳ ವರದಿ ಓದಿದ್ದೇನೆ. ಈ ರೀತಿಯ ಕೇಂದ್ರಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕಿದೆ’ ಎಂದು ನ್ಯಾಯಮೂರ್ತಿ ಸತ್ಯನಾರಾಯಣ ಹೇಳಿದರು.
‘ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ವ್ಯಸನಮುಕ್ತಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಬೇಕು. ಅವುಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಬೇಕು’ ಎಂದು ನ್ಯಾಯಪೀಠ ಮೌಖಿಕವಾಗಿ ಸೂಚಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.