ADVERTISEMENT

ಇನ್ನು ಸೋಂಕಿತರೆಲ್ಲರೂ ಮನೆ ಆರೈಕೆಯಲ್ಲಿ ಇರುವಂತಿಲ್ಲ: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 22 ಮೇ 2021, 5:44 IST
Last Updated 22 ಮೇ 2021, 5:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಇನ್ನು ಮುಂದೆ, ಕೊರೊನಾ ಸೋಂಕಿನ ಸೌಮ್ಯ ಸ್ವಭಾವದ ಲಕ್ಷಣಗಳನ್ನು ಹೊಂದಿದ ಎಲ್ಲರೂ ಮನೆ ಆರೈಕೆಯಲ್ಲಿರುವಂತಿಲ್ಲ. ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಆರೈಕೆಗೆ ಒಳಗಾಗುವ ವ್ಯವಸ್ಥೆ ಇಲ್ಲದವರು ಪಕ್ಕದ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಬೇಕು ಎಂದು ಬಿಬಿಎಂಪಿ ಹೇಳಿದೆ. ‌

ಈ ಕುರಿತು ಪರಿಷ್ಕೃತ ಆದೇಶ ಹೊರಡಿಸಿರುವ ಪಾಲಿಕೆಯು, ಮನೆ ಆರೈಕೆಗೆ ಪೂರಕವಾಗಿ ಸೋಂಕಿತರ ಮನೆಯಲ್ಲಿ ಗಾಳಿ ವ್ಯವಸ್ಥೆ, ಪ್ರತ್ಯೇಕ ಕೊಠಡಿ, ಶೌಚಾಲಯ ವ್ಯವಸ್ಥೆ ಇರಬೇಕು ಹಾಗೂ ಸೋಂಕಿತರ ಮನೆಯಲ್ಲಿ ಇತರೆ ಆರೋಗ್ಯ ಸಮಸ್ಯೆ ಇರುವವರು ಇರಬಾರದು ಎಂದು ಹೇಳಿದೆ.

ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರವೇ ಮನೆ ಆರೈಕೆಗೆ ಅನುಮತಿ ನೀಡಬೇಕು. ಇವುಗಳಲ್ಲಿ ಯಾವುದೇ ನಿರ್ದಿಷ್ಟ ವ್ಯವಸ್ಥೆ ಇಲ್ಲದೆ ಇದ್ದರೂ, ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) ಆದೇಶಿಸಿದ್ದಾರೆ.

ADVERTISEMENT

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಾದ ಕಾರಣ ಮನೆ ಆರೈಕೆಯಲ್ಲಿರುವವರನ್ನು ತಪಾಸಣೆ ಮಾಡಿ ಅನುಮತಿ ನೀಡುವುದರಲ್ಲೂ ಲೋಪವಾಗಿತ್ತು. ಅಲ್ಲದೆ, ಇತ್ತೀಚೆಗೆ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದ ಸೌಮ್ಯ ಸ್ವಭಾವದ ಸೋಂಕಿತರೂ ಕೂಡ ಸಾವನ್ನಪ್ಪುವುದು ಹೆಚ್ಚಾಗಿದ್ದರಿಂದ ಪಾಲಿಕೆ ಈ ಕ್ರಮ ಕೈಗೊಂಡಿದೆ.

ಮನೆ ಆರೈಕೆಯಲ್ಲಿದ್ದ 778 ರೋಗಿಗಳು ಮೇ ತಿಂಗಳಲ್ಲಿ ಸಾವನ್ನಪ್ಪಿದ ಬಗ್ಗೆ ಸಾವು ಪರಿಶೀಲನಾ ಸಮಿತಿಯು ವರದಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.