ವೈಟ್ಫೀಲ್ಡ್ (ಬೆಂಗಳೂರು): ‘ಮಹದೇವಪುರ ಕ್ಷೇತ್ರದ ಕೊಡತಿ ಗ್ರಾಮ ಸಮೀಪ ರಾಜೀವಗಾಂಧಿ ವಸತಿ ನಿಗಮದ ವತಿಯಿಂದ ಬಿಎಸ್ವೈ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಮನೆಗಳನ್ನು ನೀಡುವಾಗ ಮೊದಲು ಮಾಜಿ ಯೋಧರಿಗೆ ಮತ್ತು ಸ್ಥಳೀಯ ವಸತಿ ನಿರ್ಗತಿಕರಿಗೆ ಆದ್ಯತೆ ನೀಡಬೇಕು’ ಎಂದು ವಸತಿ ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ಕೊಡತಿ ಸಮೀಪ ನೂತನವಾಗಿ ನಿರ್ಮಿಸಿರುವ 264 ಮನೆಗಳ ಸ್ಥಿತಿ–ಗತಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಅಧಿಕಾರಿಗಳು ಹಣದ ಆಮಿಷದಿಂದಬೇರೆಯವರಿಗೆ ನೀಡಿರುವುದು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
‘ಮಾಜಿ ಸೈನಿಕರು ಬೆಂಗಳೂರಿನಲ್ಲಿ ಮನೆ ಪಡೆದಿದ್ದು, ಮತ್ತೊಮ್ಮೆ ಪಡೆದಿದ್ದರೆ ಅವರಿಗೆ ಹಣ ವಾಪಸ್ ಬರುವುದಿಲ್ಲ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
‘ನಗರದಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಿ ವಸತಿ ಇಲ್ಲದವರಿಗೆ ನೀಡಲಾಗುವುದು’ ಎಂದು ಹೇಳಿದರು.
ಶಾಸಕ ಅರವಿಂದ ಲಿಂಬಾವಳಿ, ‘ಮಾರತ್ತಹಳ್ಳಿ ಮತ್ತು ಸೂಲಿಕುಂಟೆ ಗ್ರಾಮಗಳಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳಲ್ಲಿ ಕ್ಷೇತ್ರದ ಬಡ ಜನತೆಗೆ ಆದ್ಯತೆ ನೀಡಲಾಗುತ್ತದೆ. ಅಧಿಕಾರಿಗಳು ಹಣದ ಆಸೆಯಿಂದ ಇತರರಿಗೆ ನೀಡಿರುವ ಮನೆಗಳನ್ನು ಖಾಲಿ ಮಾಡಿಸಲಾಗುವುದು’ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯೋಜನಾ ನಿರ್ದೇಶಕ ಎಂ.ಡಿ ರಾಮದಾಸ್ ಮನೋಹರ್, ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ತೇಜಸ್ ಕುಮಾರ್, ಪ್ರಧಾನ ವ್ಯವಸ್ಥಾಪಕ ಮಹದೇವಪ್ರಸಾದ್, ಸ್ಥಳೀಯ ಮುಖಂಡರಾದ ಮನೋಹರ ರೆಡ್ಡಿ, ಜಯಚಂದ್ರರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.